ನವದೆಹಲಿ: ಕಳೆದ 75 ವರ್ಷಗಳಲ್ಲಿ ದೇಶವು ಎಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಿತ್ತೋ ಅಷ್ಟು ಆಗಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾವು ಶಕ್ತಿ, ಸಾಮರ್ಥ್ಯ ಹೊಂದಿದ್ದರೂ ಕೆಲಸಕ್ಕೂ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಹೇಳಿದ್ದಾರೆ.
‘ನಾವು ಮುಂದೆ ಸಾಗಬೇಕಿದ್ದರೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಿದೆ. ಆದರೆ ನಾವು ಹಾಗೆ ಮಾಡಿರಲಿಲ್ಲ. ಆದ್ದರಿಂದ ಇನ್ನೂ ಮುಂದುವರಿಯುವುದು ಸಾಧ್ಯವಾಗಿಲ್ಲ’ ಎಂದು ಅವರು ಹೇಳಿದ್ದಾರೆ.
ವಿಶ್ವದ ಇತರ ಯಾವುದೇ ದೇಶಗಳಿಗಿಂತಲೂ ಹೆಚ್ಚು ಉನ್ನತ ಮತ್ತು ಶ್ರೇಷ್ಠ ವ್ಯಕ್ತಿಗಳನ್ನು ಭಾರತವು ರೂಪಿಸಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲರೂ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಾರೆ. ಆದರೆ, ನಾವು ರಾಮನಂತೆ ಕಾರ್ಯನಿರ್ವಹಿಸಬೇಕಿದೆ. ನಮಗೆ ಭರತನಂತೆ ಪ್ರೀತಿಸುವ, ಕಾಳಜಿ ವಹಿಸುವ ಸಹೋದರ ಬೇಕು. ಆದರೆ ನಾವು ಅದೇ ಹಾದಿಯನ್ನು ಅನುಸರಿಸುವುದಿಲ್ಲ ಎಂದು ಭಾಗವತ್ ಹೇಳಿದ್ದಾರೆ.