ಲಖನೌ:ಭೂ ವಿವಾದಕ್ಕೆ ಸಂಬಂಧಿಸಿದಂತೆ, ಪತ್ರಕರ್ತರೊಬ್ಬರ ಮಗಳನ್ನು ಸಜೀವ ದಹನ ಮಾಡಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ನಡೆದಿದೆ.
ಮನೆಯ ಸಮೀಪವೇ ಇರುವ ಕೊಳವೆ ಬಾವಿಯಲ್ಲಿ ನೀರು ತೆಗೆದುಕೊಳ್ಳಲು ಬಂದ ಸಂದರ್ಭದಲ್ಲಿ,ಮೂವರು ವ್ಯಕ್ತಿಗಳು ಯುವತಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಸಾಯುವ ಮೊದಲು ಆರೋಪಿಗಳ ಹೆಸರನ್ನು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದಿ ದಿನಪತ್ರಿಕೆಯೊಂದರ ಉದ್ಯೋಗಿಯಾಗಿದ್ದ ಸಂತ್ರಸ್ತೆಯ ತಂದೆ ಪ್ರದೀಪ್ ಸಿಂಗ್ ಮತ್ತು ಗ್ರಾಮದ ಕುನ್ವರ್ ಸಿಂಗ್ ಎಂಬುವವರ ನಡುವೆ ಜಮೀನಿಗೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಇತ್ತೀಚೆಗೆ ಕುನ್ವರ್ ಸಿಂಗ್ ಅವರನ್ನು ಬಂದೂಕಿನಿಂದ ಪ್ರದೀಪ್ ಸಿಂಗ್ ಹತ್ಯೆ ಮಾಡಿದ್ದರು. ಅವರೀಗ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಘರ್ಷಣೆಯಲ್ಲಿ ಪ್ರದೀಪ್ ಕೂಡ ಗಾಯಗೊಂಡಿದ್ದರು. ಈ ಸಂಬಂಧ ಎಫ್ಐಆರ್ ದಾಖಲಿಸಿದ್ದರೂ, ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.