ನವದೆಹಲಿ: ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಕೃಷಿ ಕಾಯ್ದೆ ಹಾಗೂ ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಮಂಡಿಸುವ ಹಕ್ಕಿದೆ ಎಂದು ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿಕೆ ನೀಡಿದ್ದಾರೆ.
ಬ್ರಿಟನ್ ಸಂಸತ್ತಿನಲ್ಲಿ ಭಾರತದಲ್ಲಿ ರೂಪಿಸಿರುವ ಕೃಷಿ ಕಾನೂನು ಹಾಗೂ ರೈತರ ಪ್ರತಿಭಟನೆ ಕುರಿತು ಚರ್ಚೆ ನಡೆಸಿರುವ ವಿಚಾರವಾಗಿ ಬ್ರಿಟನ್ ರಾಯಭಾರಿಗೆ ಭಾರತದ ವಿದೇಶಾಂಗ ಸಚಿವಾಲಯ ಸಮನ್ಸ್ ಜಾರಿಗೊಳಿಸಿತ್ತು. ಈ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ಕೃಷಿ ಕಾನೂನು ಚರ್ಚೆಯನ್ನು ಶಶಿ ತರೂರ್ ಸಮರ್ಥಿಸಿದ್ದಾರೆ.
ಭಾರತ ಸರ್ಕಾರವು ತನ್ನ ನಿಲುವನ್ನು ವ್ಯಕ್ತಪಡಿಸುವ ಮೂಲಕ ಕರ್ತವ್ಯ ನಿಭಾಯಿಸಿದ್ದಕ್ಕಾಗಿ ನಾನು ದೂಷಿಸುವುದಿಲ್ಲ. ಆದರೆ ಇನ್ನೊಂದು ದೃಷ್ಟಿಕೋನವಿದೆ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರತಿನಿಧಿಗಳು ಈ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹೇಳಲು ಮುಕ್ತವಾಗಿದ್ದಾರೆ ಎಂದು ಹೇಳಿದರು.
ಈ ವಿಷಯದಲ್ಲಿ ಯಾವುದೇ ಅಚ್ಚರಿಯ ವಿಷಯಗಳಿಲ್ಲ. ಪ್ರಜಾಪ್ರಭುತ್ವ ಸರ್ಕಾರಗಳ ನಡುವೆ ನ್ಯಾಯವಾದ ವ್ಯವಹಾರವಾಗಿದ್ದು, ಸಾಮಾನ್ಯವಿಚಾರವಾಗಿ ಪರಿಗಣಿಸಬೇಕು ಎಂದು ಮಾಜಿ ವಿದೇಶಾಂಗ ಸಚಿವರೂ ಆಗಿರುವ ಶಶಿ ತರೂರ್ ಹೇಳಿದರು.
ಭಾರತದಲ್ಲಿ ನಾವು ಪ್ಯಾಲೆಸ್ತಿನ್ ವಿಷಯವನ್ನು ಚರ್ಚಿಸಿದ್ದೇವೆ. ವಿದೇಶಿಯರ ಬೇರೆ ವಿಷಯಗಳ ಕುರಿತಾಗಿಯೂ ಚರ್ಚಿಸಬಹುದಾಗಿದೆ. ಬ್ರಿಟಿಷ್ ಸಂಸತ್ತಿಗೂ ಅದೇ ಹಕ್ಕಿದೆ ಎಂದು ಹೇಳಿದರು.