ಚೆನ್ನೈ: ಪರಿಶಿಷ್ಟ ಜಾತಿಗೆ ಸೇರಿದ ಆರು ವಿದ್ಯಾರ್ಥಿಗಳಿಂದ ಮುಖ್ಯೋಪಾಧ್ಯಾಯಿನಿಯೊಬ್ಬರು ಶೌಚಾಲಯ ಸ್ವಚ್ಛ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಯೊಬ್ಬರ ತಾಯಿ ನೀಡಿದ ದೂರಿನ ಅನ್ವಯ, ಆರೋಪ ಎದುರಿಸುತ್ತಿರುವ ಮುಖ್ಯ ಶಿಕ್ಷಕಿ ಗೀತಾ ರಾಣಿ ಎಂಬುವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
‘ಕೆಲ ದಿನಗಳ ಹಿಂದೆ ನನ್ನ ಮಗನಿಗೆ ಡೆಂಗ್ಯೂ ಉಂಟಾಗಿ, ಆಸ್ಪತ್ರೆಗೆ ದಾಖಲಾಗಿದ್ದ. ಹೇಗೆ ಡೆಂಗ್ಯೂ ಉಂಟಾಯಿತು ಎಂದು ಕೇಳಿದ್ದಕ್ಕೆ, ಪ್ರತಿದಿನ ಶೌಚಾಲಯ ಸ್ವಚ್ಛ ಮಾಡುವಾಗ ಸೊಳ್ಳೆ ಕಚ್ಚುತ್ತಿತ್ತು‘ ಎಂದು ಆತ ಹೇಳಿದ್ದಾಗಿ ಆತನ ತಾಯಿ, ದೂರದಾರೆ ಜಯಂತಿ ಹೇಳಿದ್ದಾರೆ.
‘ಕಳೆದ ವಾರ ಮಕ್ಕಳು ಕೈಯಲ್ಲಿ ಪಾತ್ರೆ ಹಾಗೂ ಕೋಲು ಹಿಡಿದುಕೊಂಡು ಶೌಚಾಲಯದಿಂದ ಹೊರ ಬರುವುದನ್ನು ಗಮನಿಸಿದ್ದರು. ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ, ಮುಖ್ಯ ಶಿಕ್ಷಕಿ ಶೌಚಾಲಯ ಶುಚಿಗೊಳಿಸಲು ನಿರ್ದೇಶಿಸಿದ್ದಾರೆ ಎಂದು ಉತ್ತರಿಸಿದ್ದರು. ತರಗತಿಯಲ್ಲಿ 40 ಮಕ್ಕಳಿದ್ದರೂ, ನಮ್ಮ ಮಕ್ಕಳೊಂದಿಗೆ ಅವರು ಶೌಚಾಲಯ ಸ್ವಚ್ಛಗೊಳಿಸುತ್ತಾರೆ‘ ಎಂದು ಜಯಂತಿ ಆರೋಪಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಬಾಲ ನ್ಯಾಯ ಕಾಯ್ದೆ ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಮುಖ್ಯ ಶಿಕ್ಷಕಿ ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.