ನವದೆಹಲಿ: ರಾಜಸ್ಥಾನದ ಜೈಪುರ, ಅಸ್ಸಾಂನ ಗುವಾಹಟಿ ಮತ್ತು ಕೇರಳದ ತಿರುವನಂತಪುರ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಒಪ್ಪಿಸುವ ಮಹತ್ವದ ಪ್ರಸ್ತಾವಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಅದಾನಿ ಎಂಟರ್ಪ್ರೈಸಸ್ಈ ಮೂರು ವಿಮಾನ ನಿಲ್ದಾಣಗಳನ್ನು 50 ವರ್ಷ ನಿರ್ವಹಿಸುವ ಗುತ್ತಿಗೆ ಪಡೆದಿದೆ.
ಲಖನೌ, ಅಹಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರ, ಗುವಾಹಟಿ ವಿಮಾನ ನಿಲ್ದಾಣಗಳನ್ನುಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ನಿರ್ವಹಿಸಲು2019ರ ಫೆಬ್ರುವರಿಯಲ್ಲಿ ಟೆಂಡರ್ ಕರೆಯಲಾಗಿತ್ತು. ಆದಾನಿ ಕಂಪನಿ ಆರು ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆ ಪಡೆದಿತ್ತು.
ಕಳೆದ ಜುಲೈನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೊದಲ ಹಂತದಲ್ಲಿ ಮಂಗಳೂರು, ಅಹಮದಾಬಾದ್ ಮತ್ತು ಲಖನೌ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಎಂಟರ್ಪ್ರೈಸಸ್ಗೆ ನೀಡಲು ಒಪ್ಪಿಗೆ ನೀಡಲಾಗಿತ್ತು.
ಇದೀಗ ಎರಡನೇ ಹಂತದಲ್ಲಿ ಉಳಿದ ಮೂರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದೇ ಕಂಪನಿಗೆ ವಹಿಸಲಾಗಿದೆ ಎಂದು ಜಾವಡೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಂದಿನ ಐದು ವರ್ಷಗಳಲ್ಲಿ ದೇಶದ 30–35 ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸಲು ಯೋಚಿಸುತ್ತಿದೆ.
ಮುಂದಿನ ಹಂತದಲ್ಲಿ ವಾರಾಣಸಿ, ಭುವನೇಶ್ವರ, ಇಂದೋರ್, ರಾಯಪುರ ಮತ್ತು ತಿರುಚ್ಚಿ ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಒಪ್ಪಿಸಲು ತೀರ್ಮಾನಿಸಿದೆ. ಈಗಾಗಲೇ ದೆಹಲಿ, ಮುಂಬೈ, ಹೈದರಾಬಾದ್, ಬೆಂಗಳೂರು ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಒಪ್ಪಿಸಲಾಗಿದೆ.
**
ವಿಮಾನ ನಿಲ್ದಾಣಗಳನ್ನು ಖಾಸಗಿ ಅವರಿಗೆ ವಹಿಸಿದರೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ದೊರೆಯುವುದಲ್ಲದೆ, ಆದಾಯವೂ ಹೆಚ್ಚಲಿದೆ. -ಹರದೀಪ್ ಸಿಂಗ್ ಪುರಿ, ನಾಗರಿಕ ವಿಮಾನ ಸಚಿವ