ಕೇಶ್ಪುರ್: ಪಶ್ಚಿಮ ಬಂಗಾಳದಲ್ಲಿ ಮತದಾನ ಆರಂಭವಾಗುವ ಮುನ್ನ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯಾಗಿದೆ. ಗುರುವಾರ ಬೆಳಗಿನ ಜಾವ ಪಶ್ಚಿಮ ಮೇದಿನಿಪುರ್ ಜಿಲ್ಲೆಯಲ್ಲಿ ಟಿಎಂಸಿ ಕಾರ್ಯಕರ್ತನನ್ನು ಇರಿದು ಕೊಲೆ ಮಾಡಲಾಗಿದೆ.
ಕೇಶ್ಪುರ್ ಪ್ರದೇಶದ ಸ್ಥಳೀಯ ಕ್ಲಬ್ವೊಂದರಲ್ಲಿದ್ದ ಉತ್ತಮ್ ದೊಲೌಯಿ (48) ಮೇಲೆ ಸುಮಾರು 10–15 ಜನರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲೇ ಉತ್ತಮ್ ಮೃತಪಟ್ಟಿದ್ದಾರೆ. 'ಬಿಜೆಪಿಯ ಗೂಂಡಾಗಳು ದಾಳಿ ಮಾಡಿದ್ದು, ಮತದಾನಕ್ಕೂ ಮುನ್ನ ಪ್ರಕ್ಷುಬ್ಧ ವಾತಾವರಣ ಸೃಷಿಸಿ, ಮತದಾರರನ್ನು ಬೆದರಿಸುವ ಪ್ರಯತ್ನ ಮಾಡಲಾಗಿದೆ' ಎಂದು ಉತ್ತಮ್ ಕುಟುಂಬದವರು ಆರೋಪಿಸಿದ್ದಾರೆ.
ಕೇಶ್ಪುರ್ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಭರವಸೆ ಇದ್ದು, ಹಿಂಸಾಚಾರ ನಡೆಸುವ ಯಾವುದೇ ಕಾರಣಗಳಿಲ್ಲ ಎಂದು ಬಿಜೆಪಿ ಆರೋಪಗಳನ್ನು ತಳ್ಳಿ ಹಾಕಿದೆ. ಈ ಕ್ಷೇತ್ರದಲ್ಲಿ ರಾಜಕೀಯ ಹಿಂಸಾಚಾರಗಳು ನಡೆದಿರುವ ಇತಿಹಾಸವಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ವರದಿ ಕೇಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಹತ್ಯೆ ಘಟನೆಯ ಸಂಬಂಧ ಏಳು ಜನರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೇಶ್ಪುರ್ದಲ್ಲಿ ಬೆಳಿಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ.