ನವದೆಹಲಿ: ‘ಕೋವಿಡ್–19ನಿಂದ ಗುಣಮುಖರಾದವರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಸಲಹೆ ನೀಡಿದೆ.
‘ಕೋವಿಡ್ ಸೋಂಕಿನ ಇತಿಹಾಸವಿದ್ದರೂ ಅದನ್ನು ಪರಿಗಣಿಸದೇ ಕೋವಿಡ್ ಲಸಿಕೆಯನ್ನು ಮಾರ್ಗಸೂಚಿ ಅನ್ವಯ ಪಡೆಯುವುದು ಸೂಕ್ತ. ಲಸಿಕೆಯು ರೋಗದ ವಿರುದ್ಧ ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಬೆಳೆಸಲು ಸಹಾಯ ಮಾಡುತ್ತದೆ’ ಎಂದೂ ಸಚಿವಾಲಯವು ತಿಳಿಸಿದೆ.
‘ಲಸಿಕೆಯ ಎರಡನೇ ಡೋಸ್ ಪಡೆದ ಎರಡು ವಾರಗಳ ನಂತರ ಸಾಮಾನ್ಯವಾಗಿ ದೇಹದಲ್ಲಿ ಪ್ರತಿಕಾಯಗಳು ರಕ್ಷಣಾತ್ಮಕ ಮಟ್ಟದಲ್ಲಿ ಬೆಳವಣಿಗೆಯಾಗುತ್ತವೆ. ಹೀಗಾಗಿ ಮಾರ್ಗಸೂಚಿಯ ನಿಯಮಗಳನ್ನು ಪಾಲಿಸುವುದು ಸೂಕ್ತ. ಭಾರತದಲ್ಲಿ ಪರಿಚಯಿಸಲಾಗುತ್ತಿರುವ ಲಸಿಕೆ, ಬೇರೆ ದೇಶಗಳಲ್ಲಿ ಅಭಿವೃದ್ಧಿಪಡಿಸಿರುವ ಲಸಿಕೆಗಳಿಗಿಂತ ಪರಿಣಾಮಕಾರಿಯಾಗಿದೆ’ ಎಂಬುದನ್ನೂ ಆರೋಗ್ಯ ಸಚಿವಾಲಯ ಒತ್ತಿ ಹೇಳಿದೆ.
’ಕೋವಿಡ್ 19‘ ಲಸಿಕೆ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಯು) ಲಸಿಕೆ ಪಡೆಯುವುದು ಕಡ್ಡಾಯವೇ, ಪ್ರತಿಕಾಯಗಳು ಅಭಿವೃದ್ದಿಯಾಗಲು ಎಷ್ಟು ಸಮಯ ಬೇಕಾಗುತ್ತದೆ, ಕೊರೊನಾ ಸೋಂಕಿನಿಂದ ಗುಣಮುಖರಾದವರೂ ಈ ಲಸಿಕೆಯನ್ನು ತೆಗೆದುಕೊಳ್ಳಬೇಕೇ.. ಇಂಥ ಹಲವು ಪ್ರಶ್ನೆಗಳನ್ನು ಪಟ್ಟಿ ಮಾಡಿರುವ ಸಚಿವಾಲಯ, ಈ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸುತ್ತಿದೆ.
‘ಕೋವಿಡ್ 19‘ ಲಸಿಕೆಯನ್ನು ಸ್ವಯಂಪ್ರೇರಿತರಾಗಿ ತೆಗೆದುಕೊಳ್ಳಬೇಕು. ಸಮುದಾಯದ ಆರೋಗ್ಯದ ದೃಷ್ಟಿಯಿಂದ ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಲು ಲಸಿಕೆಯ ಪೂರ್ಣ ವೇಳಾಪಟ್ಟಿ (ಅವಧಿ ಮತ್ತು ಡೋಸೇಜ್) ಯಂತೆ ಲಸಿಕೆ ತೆಗೆದುಕೊಳ್ಳುವುದು ಒಳ್ಳೆಯದು‘ ಎಂದು ತಿಳಿಸಿದೆ.
‘ಸುರಕ್ಷತೆ ಸಾಬೀತಾದಾಗ ಮಾತ್ರ ಕೋವಿಡ್ ಲಸಿಕೆ ನೀಡಲಾಗುವುದು. ಇತರ ಲಸಿಕೆಗಳಂತೆಯೇ, ಕೆಲವು ವ್ಯಕ್ತಿಗಳಲ್ಲಿ ಸಾಮಾನ್ಯ ಅಡ್ಡಪರಿಣಾಮಗಳು ಅಂದರೆ ಚುಚ್ಚುಮದ್ದಿನ ಸ್ಥಳದಲ್ಲಿ ಸೌಮ್ಯ ಜ್ವರ, ನೋವು ಇತ್ಯಾದಿಗಳು ಆಗುವ ಸಾಧ್ಯತೆ ಇರುತ್ತದೆ. ಲಸಿಕೆ ಪ್ರಯೋಗಗಳು ಅಂತಿಮ ಹಂತಗಳಲ್ಲಿವೆ. ಶೀಘ್ರದಲ್ಲೇ ಲಸಿಕೆ ನೀಡಲು ಸರ್ಕಾರ ಸಜ್ಜಾಗಿದೆ ಎಂದು ಸಚಿವಾಲಯವು ಎಫ್ಎಕ್ಯುನಲ್ಲಿ ಹೇಳಿದೆ.
‘ಲಸಿಕೆ ಪಡೆಯುವವರು ಕಡ್ಡಾಯವಾಗಿ ಆನ್ಲೈನ್ ನೋಂದಣಿ ಮಾಡಿಸಬೇಕು. ಇದರಿಂದ ಲಸಿಕೆಯ ನೀಡುವ ದಿನಾಂಕ, ಸಮಯವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ರವಾನಿಸಲು ಸಾಧ್ಯವಾಗಲಿದೆ. ನೋಂದಣಿ ಸಮಯದಲ್ಲಿ ವ್ಯಕ್ತಿಯ ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ಬುಕ್, ಪಾಸ್ಪೋರ್ಟ್ ಸಲ್ಲಿಸಬೇಕಾಗುತ್ತದೆ’ ಎಂದೂ ಸಚಿವಾಲಯವು ಮಾಹಿತಿ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.