ಲಖನೌ: ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟ ಮಾಡುವುದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಪೂರ್ಣವಾಗಿ ನಿಷೇಧ ಹೇರಿದ್ದಾರೆ.
ಧಾರ್ಮಿಕ ನಗರವಾದ ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟಗಾರರು ಹಾಲು ಮಾರಾಟ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಥುರಾದ ಬಂಕೆ ಬಿಹಾರಿ ದೇಗುಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯ ಮತ್ತು ಮಾಂಸ ಮಾರಾಟಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
‘ಮಥುರಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವೈಭವವನ್ನು ಕಾಪಾಡಲು ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸುವುದು ಅತ್ಯಗತ್ಯ' ಎಂದೂ ಯೋಗಿ ಆದಿತ್ಯನಾಥ್ ಅವರು ಪ್ರತಿಪಾದಿಸಿದ್ದಾರೆ.
ರಾಜ್ಯ ಸರ್ಕಾರವು ಅಯೋಧ್ಯೆ, ಚಿತ್ರಕೂಟ ಮತ್ತು ಇತರ ಧಾರ್ಮಿಕ ನಗರಗಳಲ್ಲೂ ಇದೇ ರೀತಿ ನಿಷೇಧ ಹೇರಲು ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.
ಯೋಗಿ ಆದಿತ್ಯನಾಥ್ ಅವರ ಈ ನಿರ್ಧಾರವನ್ನು ಅಯೋಧ್ಯೆಯ ಸಂತರು ಸ್ವಾಗತಿಸಿದ್ದಾರೆ.