ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್‌ಗೆ ಭೂಮಿ– ನಾಚಿಕೆಗೇಡಿನ ಸಂಗತಿ: ಸರ್ಕಾರಕ್ಕೆ ಎಚ್‌.ಕೆ.ಪಾಟೀಲ ಛೀಮಾರಿ

Last Updated 27 ಏಪ್ರಿಲ್ 2021, 21:34 IST
ಅಕ್ಷರ ಗಾತ್ರ

ಗದಗ: ‘ಸರ್ಕಾರಕ್ಕೆ ₹ 2,000 ಕೋಟಿಗೂ ಹೆಚ್ಚು ಹಣವನ್ನು ಹತ್ತಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕಟಬಾಕಿದಾರ ಜಿಂದಾಲ್‌ ಕಂಪನಿಗೆ ರಾಜ್ಯ ಸಚಿವ ಸಂಪುಟ ರಿಯಾಯಿತಿ ದರದಲ್ಲಿ ಭೂಮಿ ಕೊಡಲು ನಿರ್ಣಯ ಕೈಗೊಂಡಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಶಾಸಕ ಎಚ್‌.ಕೆ.ಪಾಟೀಲ ಸರ್ಕಾರಕ್ಕೆ ಛೀಮಾರಿ ಹಾಕಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಇಂದಿನ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೇ ಇದರ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದರು. ಏನೇ ಆದರೂ ಒಂದು ಇಂಚೂ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಗಟ್ಟಿ ಧ್ವನಿ ಮೊಳಗಿಸಿದ್ದರು. ಆ ಛಲ ಈಗ ಎಲ್ಲಿ ಹೋಯಿತು? ಅವತ್ತು ಜನಪರವಾಗಿ ಮಾತನಾಡಿದ ಸಿಎಂ ಇಂದು ಮಂತ್ರಿಗಳು, ನಾಯಕರ ಒತ್ತಡಕ್ಕೆ ಮಣಿದಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಲಾಕ್‌ಡೌನ್‌ ಘೋಷಣೆಯಾಗಿದೆ. ಕೋವಿಡ್‌–19 ನಿಯಂತ್ರಣಕ್ಕೆ ಗಟ್ಟಿ ನಿಲುವು ತೆಗೆದುಕೊಳ್ಳುವ ಸಂದರ್ಭದಲ್ಲಿ ಸಚಿವ ಸಂಪುಟ ಎಕರೆಗೆ ₹ 1.22 ಲಕ್ಷದಂತೆ ಶುದ್ಧಕ್ರಯ ಮಾಡಲು ನಿರ್ಣಯಿಸಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕಿಡಿಕಾರಿದರು.

‘ಒಂದು ಎಕರೆ ಭೂಮಿಗೆ ಕನಿಷ್ಠ ₹ 80 ಲಕ್ಷ ಇದೆ. ಇಷ್ಟು ಕಡಿಮೆ ಬೆಲೆಗೆ ಜಿಂದಾಲ್‌ ಕಂಪನಿಗೆ ಕೊಡುವ ಉದ್ದೇಶವಾದರೂ ಏನು? ಇದರಿಂದಾಗಿ ₹ 2,500 ಕೋಟಿಗೂ ಹೆಚ್ಚು ಹಣ ವನ್ನು ಸಚಿವ ಸಂಪುಟ ರಾಜ್ಯ ಸರ್ಕಾರಕ್ಕೆ ಪಂಗನಾಮ ಹಾಕುತ್ತಿದೆ’ ಎಂದರು.

‘ಈ ಕಂಪನಿ ಮೇಲೆ ರಾಜ್ಯ ಸರ್ಕಾರ ಎಫ್‌ಐಆರ್‌ ಮಾಡಿದೆ. ಅಕ್ರಮ ರಫ್ತು ಕುರಿತಂತೆ ಲೋಕಾಯುಕ್ತ ವರದಿ ನೀಡಿದೆ. ಆ ವರದಿಯನ್ನೂ ಉಲ್ಲಂಘಿಸಿರುವ ಈ ಸಂದರ್ಭದಲ್ಲಿ ಲೋಕಾಯುಕ್ತ ಸುಮ್ಮನೇ ಇರಬಾರದು’ ಎಂದು ಆಗ್ರಹಿಸಿದರು.

‘ಈ ನಿರ್ಣಯವನ್ನು ತಕ್ಷಣವೇ ನಿಲುಗಡೆ ಮಾಡಬೇಕು. ಈ ನಿರ್ಣಯ ಅನುಷ್ಠಾನಕ್ಕೆ ಮುಂದಡಿ ಇಟ್ಟರೆ ಸರ್ಕಾರ ಉಳಿಯುವುದು ಕಷ್ಟವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಿಂದಾಲ್ ಮುಂದೆ ಬಿಜೆಪಿ ಮಂಡಿಯೂರಿದ್ದು ಯಾಕೆ?– ಎಚ್‌ಡಿಕೆ
ಬೆಂಗಳೂರು: ‘ಜಿಂದಾಲ್ ಕಂಪನಿ ಮುಂದೆ ಬಿಜೆಪಿ ಸರ್ಕಾರ ಏಕಾಏಕಿ ಮಂಡಿಯೂರಿದ್ದಕ್ಕೆ ನಿರ್ದಿಷ್ಟ ಕಾರಣ ಇದೆ. ಅದೇನೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗೊತ್ತಿದ್ದು, ಅವರೇ ಬಹಿರಂಗಪಡಿಸಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಜಿಂದಾಲ್‌ಗೆ 3,677 ಎಕರೆ ಭೂಮಿ ಮಾರಾಟ ಮಾಡಲು ನಿರ್ಧರಿಸಿದ್ದ ನನ್ನ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಿತ್ತು. ಯಡಿಯೂರಪ್ಪ ಅಹೋರಾತ್ರಿ ಧರಣಿಗೆ ಮುಂದಾಗಿದ್ದರೆ ಬಿಜೆಪಿ ಯುವ ಮೋರ್ಚಾ ವಿಧಾನಸೌಧ ಮುತ್ತಿಗೆ ಹಾಕಿತ್ತು. ಸರ್ಕಾರದ ವಿರುದ್ಧ ಕಿಕ್‌ ಬ್ಯಾಕ್‌ ಆರೋಪವನ್ನೂ ಮಾಡಲಾಗಿತ್ತು’ ಎಂದು ಅವರು ನೆನಪಿಸಿಕೊಂಡಿದ್ದಾರೆ.

‘ಜಿಂದಾಲ್‌ಗೆ ಭೂಮಿ ನೀಡುವ ವಿಚಾರದಲ್ಲಿ ಅಂದು ನನ್ನ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಯಡಿಯೂರಪ್ಪ ಇಂದು ಅದೇ ಆರೋಪಗಳನ್ನು ತಮ್ಮ ಮೇಲೆ ಹೊತ್ತುಕೊಳ್ಳುವರೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಆಗಿನ ಕಾಂಗ್ರೆಸ್‌ ಶಾಸಕ, ಬಳಿಕ ಬಿಜೆಪಿ ಸೇರಿದ ಸಚಿವ ಆನಂದ್‌ ಸಿಂಗ್‌, ಜಿಂದಾಲ್‌ ಅನ್ನು ಈಸ್ಟ್‌ ಇಂಡಿಯಾ ಕಂಪನಿ ಎಂದಿದ್ದರು. ಅವರೇ ಇರುವ ಈಗಿನ ಸಂಪುಟ ಸಭೆ ಜಿಂದಾಲ್‌ಗೆ ಭೂಮಿ ನೀಡಿದೆ. ಆನಂದ್‌ ಸಿಂಗ್‌ ಈಗ ಈಸ್ಟ್‌ ಇಂಡಿಯಾ ಕಂಪನಿ ಪರವಾಗಿದ್ದಾರಾ?’ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

‘ಜಿಂದಾಲ್‌ಗೆ ಭೂಮಿ ನೀಡುವ ವಿಚಾರವಾಗಿ ಅಂದು ಟೀಕೆ ಮಾಡಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಶಾಸಕ ಎಚ್‌.ಕೆ ಪಾಟೀಲ್‌ ಈಗ ಏನು ಮಾಡುತ್ತಿದ್ದಾರೆ. ಈಗ ಅವುಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಯಾರು ಅಡ್ಡ ಇದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.

ಆನಂದ್‌ ಸಿಂಗ್‌ ಮೌನ– ಚರ್ಚೆಗೆ ಗ್ರಾಸ
ಹೊಸಪೇಟೆ (ವಿಜಯನಗರ): ಈ ಹಿಂದೆ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ, ಜಿಂದಾಲ್‌ ಸ್ಟೀಲ್‌ ವೆಸ್ಟರ್ನ್‌ಗೆ (ಜೆಎಸ್‌ಡಬ್ಲ್ಯೂ) ಜಮೀನು ಪರಭಾರೆ ಮಾಡಲು ಮುಂದಾದಾಗ ಅದನ್ನು ವಿರೋಧಿಸಿ ಆನಂದ್‌ ಸಿಂಗ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಈಗ ಅವರೇ ಸಂಪುಟ ದರ್ಜೆ ಮಂತ್ರಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಮೌನ ತಾಳಿರುವುದರ ಬಗ್ಗೆ ಜಿಲ್ಲೆಯಾದ್ಯಂತ ಚರ್ಚೆ ನಡೆಯುತ್ತಿದೆ.

2019ರಲ್ಲಿ ಸಮ್ಮಿಶ್ರ ಸರ್ಕಾರ ಜಿಂದಾಲ್‌ಗೆ 3,667.31 ಎಕರೆ ಜಮೀನು ಪರಭಾರೆಗೆ ಮುಂದಾಗಿತ್ತು. ಅದಕ್ಕೆ ಆನಂದ್‌ ಸಿಂಗ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಅವರು ಜಿಂದಾಲ್‌ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಈಗ ಚಕಾರ ಎತ್ತದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

‘ಜಿಂದಾಲ್‌ಗೆ ಜಮೀನು ಕೊಡುತ್ತಿರುವುದನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವೆ’ ಎಂದು ಆನಂದ್‌ ಸಿಂಗ್‌ ಹಲವು ಸಲ ಹೇಳಿದ್ದರು. ಆದರೆ, ದಿನಗಳೆದಂತೆ ಆ ವಿಷಯ ಹಿನ್ನೆಲೆಗೆ ಸರಿಯಿತು. ‘ವಿಜಯನಗರ ಜಿಲ್ಲೆ ಮಾಡುವುದೇ ಏಕೈಕ ಗುರಿ’ ಎಂದರು. ಉಪಚುನಾವಣೆಯುದ್ದಕ್ಕೂ ಇದೇ ವಿಷಯ ಮುನ್ನೆಲೆಯಲ್ಲಿ ಇತ್ತು. ಎಲ್ಲೂ ಜಿಂದಾಲ್‌ ವಿಷಯ ಚರ್ಚೆಯಾಗಲಿಲ್ಲ. ಚುನಾವಣೆ ಪ್ರಚಾರಕ್ಕೆ ಬಂದಿದ್ದ ಮುಖ್ಯಮಂತ್ರಿಯಾದಿಯಾಗಿ ಯಾರೊಬ್ಬರೂ ಆ ಬಗ್ಗೆ ಮಾತಾಡಲಿಲ್ಲ.

ಅಸಲಿಯತ್ತೇನು?: 2008, 2013ರಲ್ಲಿ ಸತತ ಎರಡು ಸಲ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ಆನಂದ್‌ ಸಿಂಗ್‌ ಅವರು, 2018ರಲ್ಲಿ ದಿಢೀರನೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದರು. ಚುನಾವಣೆಯಲ್ಲೂ ಗೆದ್ದರು. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿಲ್ಲ. ಅನೇಕ ತಿಂಗಳು ಕ್ಷೇತ್ರದಿಂದ ದೂರ ಉಳಿದರು. ಸಮ್ಮಿಶ್ರ ಸರ್ಕಾರ, ಜಿಂದಾಲ್‌ಗೆ ಜಮೀನು ಕೊಡುವುದನ್ನು ವಿರೋಧಿಸಿ, ಕಾಂಗ್ರೆಸ್‌ ಹಿರಿಯ ಮುಖಂಡ ಎಚ್‌.ಕೆ. ಪಾಟೀಲ ಸರ್ಕಾರಕ್ಕೆ ಪತ್ರ ಬರೆದರು. ಅದರ ಬೆನ್ನಲ್ಲೇ ಆನಂದ್‌ ಸಿಂಗ್‌ ಸಕ್ರಿಯರಾಗಿ ಈ ವಿಷಯ ಕೈಗೆತ್ತಿಕೊಂಡರು.

ಪುನಃ ಬಿಜೆಪಿಗೆ ಮರಳಬೇಕೆಂದು ಮೊದಲೇ ಮನಸ್ಸು ಮಾಡಿಕೊಂಡಿದ್ದ ಆನಂದ್‌ ಸಿಂಗ್‌ ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದರು. ಅದು ಜಿಂದಾಲ್‌ ಮೂಲಕ ಈಡೇರಿತು. ಬಿಜೆಪಿಯಿಂದ ಪುನಃ ಶಾಸಕರಾಗಿ ಆಯ್ಕೆಯಾದರು. ‘ವಿಜಯನಗರ ಜಿಲ್ಲೆ ಮಾಡುವುದು ನನ್ನ ಮುಖ್ಯ ಉದ್ದೇಶ. ಮಂತ್ರಿ ಸ್ಥಾನ ಬೇಕಿಲ್ಲ’ ಎಂದು ಹೋದಲೆಲ್ಲ ಹೇಳಿದರು. ಆದರೆ, ವಿಜಯನಗರ ಜಿಲ್ಲೆ ಘೋಷಣೆಯಾಗುವುದಕ್ಕೂ ಮುನ್ನವೇ ಸಚಿವರಾದರು. ಒಂದು ವರ್ಷದ ಬಳಿಕ ಜಿಲ್ಲೆಯೂ ಘೋಷಣೆಯಾಯಿತು. ರಾಜಕೀಯಕ್ಕಷ್ಟೇ ಜಿಂದಾಲ್‌ ವಿಷಯ ಬಳಸಿಕೊಂಡರೆ ಹೊರತು ರೈತರ ಮೇಲಿನ ಕಾಳಜಿಯಿಂದಲ್ಲ ಎನ್ನುವುದು ಅವರ ವಿರುದ್ಧದ ಆರೋಪ.

‘ಸಂಪುಟ ಸಭೆಗೂ ಮುನ್ನ ಸಚಿವರಿಗೆ ಚರ್ಚೆಯಾಗುವ ವಿಷಯಗಳಕಿರು ಟಿಪ್ಪಣಿ ನೀಡಲಾಗುತ್ತದೆ. ಜಮೀನು ವಿಷಯ ತೀರ್ಮಾನವಾಗಲಿದೆ ಎಂದು ಗೊತ್ತಿದ್ದರೂ ಸಭೆಯಿಂದ ದೂರ ಉಳಿದರು. ಸರ್ಕಾರ ನಿರ್ಧಾರ ಪ್ರಕಟಿಸಿದ ನಂತರವೂ ಮಾತಾಡಲಿಲ್ಲ’ ಎಂದು ರೈತ ಮುಖಂಡ ಸಣ್ಣಕ್ಕಿ ರುದ್ರಪ್ಪ, ಜೆಡಿಎಸ್‌ ಮುಖಂಡ ಪಿ.ಶಬ್ಬೀರ್‌ ಅಸಮಾಧಾನ ವ್ಯಕ್ತಪಡಿಸಿದರು.

ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್‌ ಖಾತೆ ಸಚಿವರಾಗಿರುವ ಆನಂದ್‌ ಸಿಂಗ್‌ ಅವರನ್ನು ಸಂಪರ್ಕಿಸಿದಾಗ, ‘ಜಿಂದಾಲ್‌ಗೆ ಜಮೀನು ಮಾರಾಟದ ವಿಷಯ ಸಂಪುಟದಲ್ಲಿ ಚರ್ಚೆಗೆ ಬಂದಾಗ ನೋಡೋಣ ಎಂದು ಸುಮ್ಮನಿದ್ದೆ. ಸೋಮವಾರ ನಡೆದ ಸಂಪುಟ ಸಭೆಗೂ ನಾನು ಹೋಗಲು ಆಗಲಿಲ್ಲ. ಸಭೆಯ ಅಜೆಂಡಾ ಕೂಡ ಗಮನಿಸಿರಲಿಲ್ಲ. ಜಮೀನು ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ನಿಯಮಗಳನ್ನು ಪರಿಷ್ಕರಿಸಿ, ಷರತ್ತುಗಳನ್ನು ಅನ್ವಯಿಸಿ, ಜಮೀನು ಕೊಡಲು ಸಾಧ್ಯವೇ ಎನ್ನುವುದರ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಕಿಕ್‌ಬ್ಯಾಕ್‌ ಅನುಮಾನ’
‘ಜಿಂದಾಲ್‌ಗೆ ಜಮೀನು ಪರಭಾರೆ ಮಾಡುವುದನ್ನು ಈ ಹಿಂದೆ ಬಲವಾಗಿ ವಿರೋಧಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಚಿವ ಆನಂದ್‌ ಸಿಂಗ್‌ ಹಾಗೂ ಬಿಜೆಪಿಯವರು ಈಗ ಅದನ್ನು ಮಾರಾಟ ಮಾಡಿರುವುದು ನೋಡಿದರೆ ಕಿಕ್‌ಬ್ಯಾಕ್‌ ಪಡೆದಿರುವ ಅನುಮಾನ ಬರುತ್ತಿದೆ. ಜನರು ಕೂಡ ಇದೇ ರೀತಿಯಾಗಿ ಮಾತಾಡುತ್ತಿದ್ದಾರೆ’ ಎಂದು ಬಳ್ಳಾರಿಯ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆರೋಪಿಸಿದ್ದಾರೆ.

‘ಇದೇ ಜಿಂದಾಲ್‌ನಿಂದ ಈ ಹಿಂದೆ ಯಡಿಯೂರಪ್ಪನವರು ಚೆಕ್‌ ರೂಪದಲ್ಲಿ ಕಿಕ್‌ಬ್ಯಾಕ್‌ ಪಡೆದುಕೊಂಡಿದ್ದರು. ಇಲ್ಲಿ ಪರಸ್ಪರ ಏನೋ ಋಣ ಸಂದಾಯವಾಗಿರುವಂತೆ ಕಾಣಿಸುತ್ತಿದೆ. ಜಿಂದಾಲ್‌ಗೆ ಇದುವರೆಗೆ ಎಷ್ಟು ಜಮೀನು ನೀಡಲಾಗಿದೆ. ಅದರಲ್ಲಿ ಎಷ್ಟು ಜಮೀನು ಬಳಕೆಯಾಗುತ್ತಿದೆ ಎನ್ನುವುದನ್ನು ಸರ್ಕಾರ ಹಾಗೂ ಕಂಪನಿ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು’ ಎಂದಿದ್ದಾರೆ.

***

ಜಿಂದಾಲ್‌ ಸೇರಿ ಯಾವುದೇ ಕಂಪನಿಗೆ ಜಮೀನು ಕೊಡಲು ತಕರಾರಿಲ್ಲ. ಆದರೆ, ಕಂಪನಿ ಮುಚ್ಚಿದ ನಂತರ ಆ ಜಮೀನು ಪುನಃ ಸರ್ಕಾರಕ್ಕೆ ಸೇರಬೇಕು.
-ಆನಂದ್‌ ಸಿಂಗ್‌, ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಸಚಿವ

***

ಜಿಂದಾಲ್‌ ‘ಈಸ್ಟ್‌ ಇಂಡಿಯಾ ಕಂಪನಿ’ಯಂತಿದೆ. ಅದಕ್ಕೆ ಜಮೀನು ಕೊಡಬಾರದು ಎಂದಿದ್ದ ಆನಂದ್‌ ಸಿಂಗ್ ಈಗ ಆ ಕಂಪನಿ ಪರವಾಗಿದ್ದಾರಾ?
-ಪಿ. ಶಬ್ಬೀರ್‌, ಜೆಡಿಎಸ್‌ ಮುಖಂಡ

***

ಜಿಂದಾಲ್‌ಗೆ ಜಮೀನು ಕೊಡುವುದನ್ನು ವಿರೋಧಿಸಿ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಆನಂದ್‌ ಸಿಂಗ್‌ ಈಗೇಕೆ ಮೌನವಾಗಿದ್ದಾರೆ?
-ಸಣ್ಣಕ್ಕಿ ರುದ್ರಪ್ಪ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT