ಅಧಿವೇಶನ ಕಾವಲಿಗೆ 4,931 ಪೊಲೀಸರು

ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳೂ ಸೇರಿದಂತೆ 4,931 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ.
ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಅವರು ಶನಿವಾರ ಎಲ್ಲ ಭದ್ರತೆ ಸಿದ್ಧತೆಗಳನ್ನು ಪರಿಶೀಲಿಸಿದರು. 2021ರ ಅಧಿವೇಶನ ವೇಳೆ ಆದ ಸಣ್ಣಪುಟ್ಟ ಲೋಪಗಳನ್ನು ಗಮನದಲ್ಲಿ ಇಟ್ಟುಕೊಂಡು ಭದ್ರತೆ ಏರ್ಪಡಿಸಲಾಗುತ್ತಿದೆ. ಅನುಭವಿ ಅಧಿಕಾರಿಗಳಿಗೇ ವಿವಿಧ ವಿಭಾಗಗಳ ಜವಾಬ್ದಾರಿ ವಹಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.
ಈ ಬಾರಿ 6 ಮಂದಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 11 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 43 ಡಿವೈಎಸ್ಪಿಗಳು, 95 ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ಗಳು, 241 ಪಿಎಸ್ಐ, 298 ಎಎಸ್ಐ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದ ಕರೆಸಿದ 2,829 ಹೆಡ್ಕಾನ್ಸ್ಟೆಬಲ್ಗಳು, 800 ಸಿಬ್ಬಂದಿಯ ಕೆಎಸ್ಆರ್ಪಿ ತುಕಡಿಗಳು, 170 ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ (ಕ್ಯುಆರ್ಟಿ), 35 ಗರುಡಾ (ವಾಹನ ತಪಾಸಣೆ) ತಂಡ, 130 ಎಎಸ್ಸಿಗಳು, 100 ಮಂದಿ ವೈರ್ಲೆಸ್ ಸಿಬ್ಬಂದಿ, 100 ಹೋಮ್ಗಾರ್ಡ್ಗಳು ಶಸ್ತ್ರಸಜ್ಜಿತರಾಗಿ ನಿಲ್ಲಲಿದ್ದಾರೆ.
ಬೆಳಗಾವಿ ನಗರದ ಆಯಕಟ್ಟಿನ ಸ್ಥಳಗಳು, ಸೂಕ್ಷ್ಮ ಪ್ರದೇಶಗಳು, ಗ್ರಾಮೀಣ ಭಾಗ, ಸುವರ್ಣ ವಿಧಾನಸೌಧದ ಆವರಣ, ಸಮೀಪದಲ್ಲಿ ಮಾಡಿದ ಪ್ರತಿಭಟನಾ ಸ್ಥಳಗಳು, ಸೌಧದ ಸುತ್ತಲಿನ ಗ್ರಾಮಗಳು ಹೀಗೆ ಬೇರೆ–ಬೇರೆ ಸ್ಥಳಗಳಿಗೆ ಆದ್ಯತೆ ಮೇರೆಗೆ ಸಿಬ್ಬಂದಿ ನಿಯೋಜನೆ ಮಾಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
26 ಕಡೆ ಚೆಕ್ಪೋಸ್ಟ್: ಕರ್ನಾಟಕ– ಮಹಾರಾಷ್ಟ್ರ ಗಡಿಗಳ ಮಧ್ಯೆ ಒಟ್ಟು 23 ಮಾರ್ಗಗಳು ಇವೆ. ಇದರೊಂದಿಗೆ ಮತ್ತೆ ಮೂರು ಸೇರಿ ಒಟ್ಟು 26 ಚೆಕ್ಪೋಸ್ಟ್ ತೆರೆಯಲಾಗಿದೆ. ಅಗ್ನಿಶಾಮಕ ದಳದ 12 ವಾಹನ, 16 ಆಂಬುಲೆನ್ಸ್, 1 ಗರುಡಾ ಪಡೆ, 60 ಸರ್ಕಾರಿ ಬಸ್ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಎಲ್ಲೆಲ್ಲಿ ಇವೆ ವಸತಿಗಳು...
ಹೊರ ಜಿಲ್ಲೆಯಿಂದ ಕರ್ತವ್ಯಕ್ಕೆ ಬರುವ ಪೊಲೀಸರಿಗಾಗಿ ಟೌನ್ಷಿಪ್ ನಿರ್ಮಿಸಲಾಗಿದೆ. ಮುಕ್ತಿಮಠ, ಕಂಗ್ರಾಳಯ ತರಬೇತಿ ಶಾಲೆ, ಮಚ್ಚೆಯ ಕೆಎಸ್ಆರ್ಪಿ, ಸಾಂಬ್ರಾದ ಎಟಿಎಸ್, ವೀರಭದ್ರೇಶ್ವರ ಮಂದಿರ, ಬೆಳಗಾವಿಯ ಡಿಎಆರ್ ಪಿಐಎಸ್, ಬಂಟರ ಭವನ, ಬಾಬು ಜಗಜೀವನರಾಮ್ ಸಭಾಂಗಣ, ರೈತ ಭವನ, ಗುಜರಾತ ಭವನ, ಚಿಂಡಕ ಸಭಾಂಗಣ, ಶಹಾಪುರದ ಮಾರುತಿ ಮಂದಿರ, ಪಂತ ಮಹಾರಾಜ ಕಲ್ಯಾಣ ಮಂಟಪ, ಪೊಲೀಸ್ ಗೆಸ್ಟ್ ಹೌಸ್ ಇಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.