ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನವನ್ನು ವಿಧಾನಸಭೆ ಮತ್ತು ಪರಿಷತ್ತಿನ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಸೆಪ್ಟಂಬರ್ 21 ರಿಂದ ಆರಂಭವಾಗಲಿರುವ ಅಧಿವೇಶನಕ್ಕೆ ಸಂಬಂಧಿಸಿದ ತಯಾರಿಗಳನ್ನು ವೀಕ್ಷಿಸಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಜತೆ ವಿಧಾನಸಭೆಯ ಸಭಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ವಿಧಾನಸಭೆಯಲ್ಲಿ ಒಟ್ಟು 274 ಆಸನಗಳಿವೆ. ಹೀಗಾಗಿ ಸದಸ್ಯರ ಆಸನಗಳ ಮಧ್ಯೆ ಅಂತರ ಕಾಪಾಡಲಾಗುವುದು. ಪ್ರತಿಯೊಬ್ಬ ಸದಸ್ಯರ ಆಸನದ ಎರಡೂ ಬದಿಗಳಲ್ಲಿ ಗಾಜಿನ ರಕ್ಷಾ ತಡೆಗಳನ್ನು ಅಳವಡಿಸಲಾಗುವುದು. ಸದಸ್ಯರು ಮುಖ ಗವುಸು ಮತ್ತು ಮುಖ ರಕ್ಷಕಗಳನ್ನು ಕಡ್ಡಾಯವಾಗಿ ಧರಿಸಬೇಕು. ಅಧಿಕಾರಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಮಾತ್ರ ಅಧಿವೇಶನಕ್ಕೆ ಪ್ರವೇಶ ಇರುತ್ತದೆ. ಸುದ್ದಿಗಾರರಿಗೆ ಪ್ರವೇಶ ನೀಡುವ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು. ಪ್ರೇಕ್ಷಕರ ಗ್ಯಾಲರಿಗೆ ನಿರ್ಬಂಧ ವಿಧಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.
‘ವಿಧಾನಸಭಾ ಸಭಾಂಗಣದಲ್ಲಿ ಅಧಿವೇಶನ ನಡೆಸಬೇಕೆಂದು ಸಭಾಧ್ಯಕ್ಷರು ಅಧಿಕಾರಿಗಳ ಜತೆ ಚರ್ಚಿಸಿ ನಿರ್ಣಯಿಸಿದ್ದಾರೆ. ಅದಕ್ಕೆ ನಾವು ಒಪ್ಪಿಗೆ ನೀಡಿದ್ದೇವೆ. ಇಲಾಖೆಯಿಂದ ಒಬ್ಬ ಅಧಿಕಾರಿ ಬರಬಹುದು. ಸಚಿವರ ಜತೆ ಆಪ್ತ ಕಾರ್ಯದರ್ಶಿ ಪ್ರವೇಶಕ್ಕೆ ಅವಕಾಶ ಇದೆ. 70 ವರ್ಷ ಮೇಲ್ಪಟ್ಟವರಿಗೆ ವಿನಾಯಿತಿ ನೀಡುವ ಕುರಿತು ಚರ್ಚಿಸಲಾಗುವುದು. ಮಾಧ್ಯಮದವರಿಗೆ ಫೇಸ್ ಶೀಲ್ಡ್ ಮತ್ತು ಮುಖಗವುಸು ವಿತರಿಸಲಾಗುವುದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.