ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾಂಶ ಒತ್ತಡ l ಕಾರ್ಯಾಚರಣೆ ನಿಲ್ಲಿಸಿದ ನಿರ್ಮಾಣ್ 2.0 ಸಾಫ್ಟ್‌ವೇರ್

ಕಟ್ಟಡ ನಿರ್ಮಾಣ ಅನುಮತಿ ಸ್ಥಗಿತ
Last Updated 8 ಜುಲೈ 2022, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಿರ್ಮಾಣ್‌– 2.0 ಸಾಫ್ಟ್‌ವೇರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, 12 ದಿನದಿಂದ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇದರಿಂದಾಗಿ, ರಾಜ್ಯದಾದ್ಯಂತ ನಗರ ಗಳಲ್ಲಿ ಕಟ್ಟಡ, ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿಗಳು ಬಾಕಿ ಉಳಿದಿವೆ.

‘ನಿರ್ಮಾಣ್‌’ ಸಾಫ್ಟ್‌ವೇರ್‌ನ ಕಾರ್ಯನಿರ್ವಹಣೆಗೆ ಯತ್ನಿಸಿ ಕ್ಲಿಕ್‌ ಮಾಡಿದರೆ, ಎಲ್‌ಬಿಪಿಎಸ್‌ ವೆಬ್‌ಸೈಟ್ ನಿರ್ವಹಣೆಯಲ್ಲಿದೆ. ಸಿಸ್ಟಂ ಅಪ್‌ಗ್ರೇಡ್ ಆದ ಬಳಿಕ ಸರಿ ಹೋಗಲಿದೆ ಎಂಬ ಸಂದೇಶ ಗೋಚರಿಸಲಿದೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ಅರ್ಜಿಗಳ ನಿರ್ವಹಣೆಗೆ ಕರ್ನಾಟಕ ಮುನ್ಸಿಪಲ್‌ ಡೇಟಾ ಸೊಸೈಟಿಯು (ಕೆಎಂಡಿಎಸ್) ‘ನಿರ್ಮಾಣ್–2.0’ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದೆ. ಇದರಿಂದಾಗಿ, ಜನರು ಕಚೇರಿಗೆ ಹೋಗದೆ ಆನ್‌ಲೈನ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಕುಳಿತಲ್ಲಿಯೇ ಅನುಮತಿಯನ್ನು ಪಡೆಯಬಹುದಿತ್ತು.

ಇದೀಗ ಸಾಫ್ಟ್‌ವೇರ್ ಸ್ಥಸ್ಥಗಿತಗೊಂಡಿರುವುದರಿಂದ, ಮನೆ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಾಗಿರು ವವರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ತುರ್ತು ಅಗತ್ಯವುಳ್ಳವರು ಅರ್ಜಿ ಹಿಡಿದು ಕಚೇರಿ ಗಳಿಗೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ದತ್ತಾಂಶದ ಒತ್ತಡ: ‘ನಿರ್ಮಾಣ್ ಸಾಫ್ಟ್‌ವೇರ್ ಕಟ್ಟಡ ಪರವಾನಗಿಗೆ ಸಂಬಂಧಿಸಿದ ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆಯಾಗಿದೆ. ಆನ್‌ಲೈನ್‌ ಮೂಲಕ ರಾಜ್ಯದಾದ್ಯಂತ ನಿತ್ಯ ಅರ್ಜಿಗಳು ಸಲ್ಲಿಕೆ ಯಾಗುತ್ತವೆ. ಜೊತೆಗೆ, ಇತರ ಪ್ರಕ್ರಿಯೆಗಳಿಂದಾಗಿ ದತ್ತಾಂಶದ ಒತ್ತಡ ಹೆಚ್ಚಾಗಿದೆ. ಹಾಗಾಗಿ, ಕಾರ್ಯಾಚರಣೆ ನಿಲ್ಲಿಸಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಫ್ಟ್‌ವೇರ್ ನಿರ್ವಹಣೆಯ ಹೊಣೆ ಹೊತ್ತಿರುವ ಕಂಪನಿಯವರು ದೋಷ ಸರಿಪಡಿಸಲು ಸತತ ಪ್ರಯತ್ನ ಮಾಡು ತ್ತಿದ್ದಾರೆ. ಹಾಗಾಗಿ, ಹಳೆಯ ನಿರ್ಮಾಣ್‌–1 ಸಾಫ್ಟ್‌ವೇರ್ ಮೂಲಕ ಅರ್ಜಿಗಳನ್ನು ತಾತ್ಕಾಲಿಕವಾಗಿ ನಿರ್ವ ಹಿಸಲು ಸೂಚನೆ ನೀಡಲಾಗಿದೆ’ ಎಂದರು.

ಸಿಬ್ಬಂದಿಯಿಂದ ನಿರ್ವಹಣೆ: ‘ಪರವಾನಗಿ ಕೋರಿ ಬರುತ್ತಿದ್ದ ಅರ್ಜಿಗಳನ್ನು ನಿರ್ಮಾಣ್‌ ಸಾಫ್ಟ್‌ವೇರ್ ಸ್ವಯಂ ಪರಿಶೀಲಿಸುತ್ತಿತ್ತು. ಅದರಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿ ಕೊಂಡಿರುವುದರಿಂದ, ಹಳೇ ನಿರ್ಮಾಣ್–1 ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡಲು ಸೂಚನೆ ಬಂದಿದೆ. ಇದರಲ್ಲಿ, ಸೆಟ್‌ಬ್ಯಾಕ್ ಸೇರಿದಂತೆ ನಿರ್ಮಾಣಕ್ಕೆ ಸಂಬಂಧಿಸಿದ ಕೆಲ ಪ್ರಕ್ರಿಯೆಗಳನ್ನು ಸಿಬ್ಬಂದಿ ಭೌತಿಕವಾಗಿ ನಿರ್ವಹಿಸಬೇಕಿದೆ’ ಎಂದು
ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಆರ್‌.ಎಂ. ಕುಲಕರ್ಣಿ ತಿಳಿಸಿದರು.

‘ಸಾಫ್ಟ್‌ವೇರ್ ಕಾರ್ಯ ನಿರ್ವಹಣೆ ಸ್ಥಗಿತಗೊಂಡು 12 ದಿನವಾದರೂ, ಸಂಬಂಧಪಟ್ಟವರು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಸಾಫ್ಟ್‌ವೇರ್ ನಿರ್ವಹಣೆಯ ಟೆಂಡರ್ ಪಡೆದಿರುವವರು ಸಮಸ್ಯೆಗೆ ಪರಿಹಾರ ಕಂಡುಹಿಡಿಯದೆ ಕೈ ಚೆಲ್ಲಿ ಕುಳಿತಿದ್ದಾರೆ. ಜನ ಮುಂಚಿನಂತೆ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ನಗರದ ಸಾಮಾಜಿಕ ಕಾರ್ಯಕರ್ತ ಅತೀಕ್ ಕೊಪ್ಪಳ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT