‘ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಪ್ರವಾಸಿಗರಿದ್ದ ಖಾಸಗಿ ಬಸ್ಸೊಂದು ಕಮಲಾಪುರದಿಂದ ಹಂಪಿಯ ವಿಜಯ ವಿಠಲ ದೇವಸ್ಥಾನದ ಕಡೆಗೆ ಹೋಗುವಾಗ ಮಾರ್ಗ ಮಧ್ಯದ ಮಂಟಪದೊಳಗೆ ಸಿಕ್ಕಿ ಬಿದ್ದಿದೆ. ಬಸ್ ಹಿಂದೆ, ಮುಂದೆ ಹೋಗಲಿಕ್ಕಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದರಿಂದ ಸುಮಾರು 20 ನಿಮಿಷ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಾಲುದ್ದ ವಾಹನಗಳು ನಿಂತಿದ್ದವು. ಬಳಿಕ ಚಾಲಕ ಏನೂ ತೋಚದೆ ಬಸ್ ಓಡಿಸಿಕೊಂಡು ಮುಂದೆ ಹೋಗಿದ್ದರಿಂದ ಅದರ ಮೇಲ್ಭಾಗಕ್ಕೆ ಹಾನಿಯಾಗಿದೆ. ಮೊದಲೇ ಶಿಥಿಲಗೊಂಡಿರುವ ಮಂಟಪಕ್ಕೂ ಧಕ್ಕೆಯಾಗಿದೆ. ಇಷ್ಟಾದರೂ ಪೊಲೀಸರಾಗಲಿ, ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಿಬ್ಬಂದಿಯಾಗಲಿ ಆ ಕಡೆ ಸುಳಿಯಲಿಲ್ಲ’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು.