ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲಪಾಡ್, ರಕ್ಷಾ ರಾಮಯ್ಯ ಹಗ್ಗ ಜಗ್ಗಾಟ: ಯುವ ಕಾಂಗ್ರೆಸ್‌ ಅಧಿಕಾರ ಹಂಚಿಕೆಗೆ ಸೂತ್ರ

ಇದೇ 4ಕ್ಕೆ ಸಭೆ
Last Updated 30 ಜೂನ್ 2021, 19:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗೊಂದಲಕ್ಕೆ ಅಂತ್ಯಹಾಡಲು ರಕ್ಷಾ ರಾಮಯ್ಯ ಮತ್ತು ಮೊಹಮ್ಮದ್‌ ನಲಪಾಡ್‌ ಮಧ್ಯೆ ಅಧಿಕಾರ ಹಂಚಿಕೆಯ ‘ಸಂಧಾನ ಸೂತ್ರ’ವೊಂದನ್ನು ಕಾಂಗ್ರೆಸ್‌ ಮುಂದಿಟ್ಟಿದೆ. ಈ ಬಗ್ಗೆ ಇದೇ 4ರಂದು ಯುವ ಕಾಂಗ್ರೆಸ್‌ ಮತ್ತು ಕೆಪಿಸಿಸಿ ನಾಯಕರು ಸಭೆ ನಡೆಸಿ ತೀರ್ಮಾನಿಸಲು ಮುಂದಾಗಿದ್ದಾರೆ.

ಇತ್ತೀಚೆಗೆ ದೆಹಲಿಗೆ ತೆರಳಿದ್ದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ನಡೆಯುತ್ತಿರುವ ಹಗ್ಗಜಗ್ಗಾಟವನ್ನು ವರಿಷ್ಠರ ಗಮನಕ್ಕೆ ತಂದಿದ್ದರು. ಈ ವೇಳೆ ಪರಸ್ಪರ ಸಂಧಾನದ ಮೂಲಕ ಸಮಸ್ಯೆ ಪರಿಹರಿಸುವಂತೆ ಹಿರಿಯ ನಾಯಕರು ಸಲಹೆ ನೀಡಿದ್ದರು ಎಂದು ಗೊತ್ತಾಗಿದೆ.

ಇದೇ ಕಾರಣಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಯುವ ಕಾಂಗ್ರೆಸ್‌ ಉಸ್ತುವಾರಿಯೂ ಆಗಿರುವ ಎಐಸಿಸಿ ಜಂಟಿ ಕಾರ್ಯದರ್ಶಿ ಕೃಷ್ಣ ಆಳ್ವಾರ್‌, ರಕ್ಷಾ ರಾಮಯ್ಯ ಮತ್ತು ಮೊಹಮ್ಮದ್‌ ನಲಪಾಡ್‌ ಜೊತೆ ಮಂಗಳವಾರ (ಜೂನ್‌ 29) ರಾತ್ರಿ ಡಿ.ಕೆ. ಶಿವಕುಮಾರ್‌ ಸಭೆ ನಡೆಸಿದ್ದರು. ಮಧ್ಯರಾತ್ರಿವರೆಗೆ ಸಭೆ ನಡೆದರೂ ಒಮ್ಮತ ಸಾಧ್ಯ ಆಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಸದ್ಯ ಅಧ್ಯಕ್ಷರಾಗಿರುವ ರಕ್ಷಾ ರಾಮಯ್ಯ ಡಿ. 31ರವರೆಗಿನ ಆರು ತಿಂಗಳು ಅವಧಿಗೆ ಮಂದುವರಿಯಲಿ. ಬಳಿಕ ಮೊಹಮ್ಮದ್‌ ನಲಪಾಡ್‌ಗೆ ಬಿಟ್ಟುಕೊಡಬೇಕು ಎಂಬ ಸೂತ್ರವನ್ನು ಡಿ.ಕೆ. ಶಿವಕುಮಾರ್‌ ಮುಂದಿಟ್ಟಿದ್ದಾರೆ. ಆದರೆ, ಇದಕ್ಕೆ ರಕ್ಷಾ ರಾಮಯ್ಯ ಒಪ್ಪಿಲ್ಲ. ಮುಂದಿನ ಒಟ್ಟು ಅವಧಿಯಲ್ಲಿ (ಸುಮಾರು 30 ತಿಂಗಳು) ಅರ್ಧದಷ್ಟು ಅವಧಿಗೆ ಕಾರ್ಯ ನಿರ್ವಹಿಸಲು ಅವಕಾಶ ಕೊಡಬೇಕು. ಈ ಅವಧಿಯಲ್ಲಿ ನಲಪಾಡ್‌ ಮಧ್ಯಪ್ರವೇಶಿಸಬಾರದು. ಅಷ್ಟೇ ಅಲ್ಲ, ಅವರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್‌ನಲ್ಲಿ ಸ್ಥಾನ ನೀಡಬೇಕು ಎಂಬ ಸಲಹೆಯನ್ನು ರಕ್ಷಾ ನೀಡಿದ್ದಾರೆ’ ಎಂದೂ ಗೊತ್ತಾಗಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿದ್ದ ಮೊಹಮ್ಮದ್‌ ನಲಪಾಡ್‌ ಅವರನ್ನು ಅನರ್ಹಗೊಳಿಸಿ, ಎರಡನೇ ಸ್ಥಾನ ಗಳಿಸಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ತಿರಸ್ಕರಿಸಿರುವ ಬಗ್ಗೆ ರಕ್ಷಾ ಅವರು ವರಿಷ್ಠರಿಗೆ ದೂರು ನೀಡಿದ್ದರು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಕಾರಣಕ್ಕೆ ನಲಪಾಡ್‌ ಅವರನ್ನು ಫಲಿತಾಂಶದ ಬಳಿಕ ಅನರ್ಹಗೊಳಿಸಲಾಗಿತ್ತು.

ಸಿದ್ದರಾಮಯ್ಯ ತೀವ್ರ ಅಸಮಾಧಾನ
ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ರಕ್ಷಾ ಅವರನ್ನು ಬದಲಿಸುವ ವಿಚಾರದ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಸಿದ್ದರಾಮಯ್ಯ ಅವರನ್ನು ಬುಧವಾರ ಬೆಳಿಗ್ಗೆ ಭೇಟಿ ಮಾಡಿದ್ದ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಈ ವಿಚಾರ ಚರ್ಚೆ ಮಾಡಿದ್ದಾರೆ. ಈ ವೇಳೆ, ‘ಚುನಾವಣೆಗೆ ಇನ್ನು ಎರಡು ವರ್ಷ ಮಾತ್ರವಿದೆ. ಪಕ್ಷ ಸಂಘಟನೆಯಲ್ಲಿ ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಹತ್ವದ್ದು. ಆ ಹುದ್ದೆಯಲ್ಲಿರುವವರು ಉತ್ತಮ ನಡವಳಿಕೆ ಹೊಂದಿರುವುದೂ ಮುಖ್ಯ’ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ‘ಈ ವಿಚಾರದಲ್ಲಿ ನಾನು ನೀಡಿರುವ ಸಲಹೆಯನ್ನು ನಿಮಗೆ ಹೇಳಲು ಆಗದು. ಅವರು (ಶ್ರೀನಿವಾಸ್‌) ಏನೋ ಒಂದು ಸಂಧಾನ ಮಾಡುತ್ತೇವೆ ಅಂದಿದ್ದಾರೆ. ಇಬ್ಬರನ್ನೂ ಕೂರಿಸಿಕೊಂಡು ಹೊಂದಾಣಿಕೆ ಮಾಡಿ ಎಂದಿದ್ದೇನೆ’ ಎಂದರು.

ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡಲು ಡಿ.ಕೆ. ಶಿವಕುಮಾರ್ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT