ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತ: ರೋಗಿಗೆ ವಿಮಾನದಲ್ಲೇ ಚಿಕಿತ್ಸೆ ನೀಡಿ ಆಕಾಶದಲ್ಲೇ ಜೀವ ಉಳಿಸಿದ ವೈದ್ಯ

Last Updated 14 ನವೆಂಬರ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾನ ಪ್ರಯಾಣದ ಸಂದರ್ಭದಲ್ಲೇ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ಸಕಾಲಕ್ಕೆ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ವೈದ್ಯರೊಬ್ಬರು ಜೀವ ಉಳಿಸಿದ್ದಾರೆ.

ತಜ್ಞ ವೈದ್ಯ ಡಾ. ವಿಶ್ವರಾಜ್‌ ವೇಮಲ ರೋಗಿಯನ್ನು ರಕ್ಷಿಸಿದವರು.ಸತತ ಐದು ಗಂಟೆಗಳ ಕಾಲ 43 ವರ್ಷದ ವ್ಯಕ್ತಿಯ (ರೋಗಿಯ ಹೆಸರನ್ನು ವೈದ್ಯರು ಬಹಿರಂಗ ಪಡಿಸಿಲ್ಲ) ಮೇಲೆ ನಿಗಾವಹಿಸಿ ಚಿಕಿತ್ಸೆ ನೀಡಿದ್ದಾರೆ.ನ.12ರಂದು ಲಂಡನ್‌ನಿಂದ ಭಾರತಕ್ಕೆ ತಮ್ಮ ತಾಯಿ ಜತೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ತಮಗೆ ಸಹಕಾರ ನೀಡಿದ್ದಕ್ಕೆ ಡಾ. ವಿಶ್ವರಾಜ್‌ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

‘ಇಡೀ ದೃಶ್ಯವನ್ನು ನೋಡಿ ನನ್ನ ಜತೆಗಿದ್ದ ತಾಯಿ ಕಣ್ಣೀರಾದರು. ಎಐ128 ವಿಮಾನದಲ್ಲಿ ಕಳೆದ ಈ ಕ್ಷಣಗಳು ದುಗುಡದಿಂದ ಕೂಡಿದ್ದವು’ ಎಂದು ವಿಶ್ವರಾಜ್‌ ವಿವರಿಸಿ ಇಡೀ ಘಟನೆಯನ್ನು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

‘ಆರಂಭದಲ್ಲಿ ಕರಾಚಿಯಲ್ಲಿ ವಿಮಾನ ಇಳಿಸುವ ಬಗ್ಗೆ ಯೋಚಿಸಲಾಗಿತ್ತು. ಈ ಸ್ಥಳ ವಿಮಾನ ಹಾರಾಟದ ಜಾಗಕ್ಕೆ ಹತ್ತಿರವಾಗಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬರಲಿಲ್ಲ. ಇದೇ ವೇಳೆ, ರೋಗಿಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಎರಡನೇ ಬಾರಿಗೆ ಹೃದಯಾಘಾತವಾಯಿತು. ಈ ವ್ಯಕ್ತಿಯನ್ನು ಕಳೆದುಕೊಂಡೆ ಎಂದೇ ನಾನುಕ್ಷಣ ಕಾಲ ಭಾವಿಸಿದ್ದೆ. ಅದೃಷ್ಟವಶಾತ್ ನನ್ನ ಬಳಿ ಹೃದಯಾಘಾತದ ಸಂದರ್ಭದಲ್ಲಿ ತಕ್ಷಣಕ್ಕೆ ಚಿಕಿತ್ಸೆ ನೀಡುವ ಅಟೊಮೆಟೆಡ್‌ ಎಕ್ಸ್‌ಟರ್ನಲ್‌ ಡಿಫಿಬ್ರಿಲೇಟರ್‌ (ಎಇಡಿ) ಇತ್ತು. ಜತೆಗೆ, ವಿಮಾನದಲ್ಲಿ ತುರ್ತು ಪರಿಸ್ಥಿತಿಗಾಗಿ ಇರಿಸಿದ್ದ ವೈದ್ಯಕೀಯ ಔಷಧಗಳನ್ನು ಬಳಸಿದೆ. ಗಗನಸಖಿಯರು ನನ್ನ ಕಾರ್ಯದಲ್ಲಿ ನೆರವಾದರು.ಅದರಲ್ಲೂ ಮಲ್ಲಿಸಾ ಅವರ ಸೇವೆ ಶ್ಲಾಘನೀಯ. ನಾನು ಸೂಚಿಸಿದ ಪ್ರತಿಯೊಂದು ಕಾರ್ಯ ಕೈಗೊಂಡರು. ನರ್ಸ್ ರೀತಿಯಲ್ಲಿ ಅವರುಕಾರ್ಯನಿರ್ವಹಿಸಿದರು’ ಎಂದು ವಿವರಿಸಿದ್ದಾರೆ.

‘ಮಂಗಳೂರಿನವರಾದ ಗಗನ ಸಖಿಗಿರಿಥಾ ಅವರು ಸಹ ನೆರವಾದರು. ತಂಡದ ಮುಖ್ಯಸ್ಥ ಪ್ರಶಾಂತ್‌ ಅವರು ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದರು. ನಂತರ, ವಿಮಾನವು ಮುಂಬೈಗೆ ಬಂದಿಳಿಯಿತು. ರೋಗಿಯ ಆರೋಗ್ಯ ಸ್ಥಿರವಾಗಿತ್ತು. ರೋಗಿಯನ್ನು ತುರ್ತು ನಿಗಾ ಘಟಕದ ತಂಡಕ್ಕೆ ಸಂಪೂರ್ಣ ವಿವರಗಳೊಂದಿಗೆ ಹಸ್ತಾಂತರಿಸಲಾಯಿತು. ಕಣ್ಣೀರು ಹಾಕುತ್ತ ರೋಗಿಯು ನನಗೆ ಧನ್ಯವಾದಗಳನ್ನು ತಿಳಿಸಿದರು. ತನ್ನ ಜೀವವನ್ನು ಉಳಿಸಿದ್ದಕ್ಕಾಗಿ ಇಡೀ ಜೀವಮಾನ ನೆನೆಯುತ್ತೇನೆ. ಈ ಕ್ಷಣಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ’ ಎಂದು ವಿವರಿಸಿದ್ದಾರೆ.

‘ಒಂದು ಜೀವವನ್ನು ಉಳಿಸಲುವಿಮಾನದಲ್ಲಿದ್ದ ವಿವಿಧ ಹಿನ್ನೆಲೆಯಪ್ರಯಾಣಿಕರು ಒಗ್ಗೂಡಿದ್ದು ನನಗೆ ಅದ್ಭುತವೆನಿಸಿತು. ಅರ್ಧದಷ್ಟು ಗಗನಸಖಿಯರು ರೋಗಿಯ ಸೇವೆಯಲ್ಲಿ ನಿರತರಾಗಿದ್ದರೂ ಯಾವುದೇ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಲಿಲ್ಲ.ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಅದು ಸಂಭ್ರಮದ ಕ್ಷಣವೂ ಆಗಿತ್ತು. ರೋಗಿಯ ಆರೋಗ್ಯ ಸ್ಥಿರವಾಗಿದೆ ಎಂದು ಕ್ಯಾಪ್ಟನ್‌ ಘೋಷಿಸಿದ ಬಳಿಕ ಎಲ್ಲರೂ ನನಗೆ ಮತ್ತು ನನ್ನ ತಾಯಿಯನ್ನು ಉತ್ಸಾಹದಿಂದ ಅಭಿನಂದಿಸಿದರು. ಒಟ್ಟಾರೆ, ಇದೊಂದು ಅದ್ಭುತ ಅನುಭವ’ ಎಂದು ವಿವರಿಸಿದ್ದಾರೆ.

ಸದ್ಯ ಲಂಡನ್‌ನಲ್ಲಿ ವೈದ್ಯರಾಗಿರುವ ಡಾ. ವಿಶ್ವರಾಜ್‌ ವೇಮಲ ಅವರು ಬೆಂಗಳೂರಿನಲ್ಲಿ ಅಧ್ಯಯನ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT