ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರೇ ಹೆಚ್ಚಾಗಿರುವ ಪ್ರದೇಶಗಳು ಮಹಾರಾಷ್ಟ್ರದಲ್ಲೂ ಇವೆ: ಎಚ್‌ಡಿಕೆ ತಿರುಗೇಟು

ಅಕ್ಷರ ಗಾತ್ರ

ಬೆಂಗಳೂರು: 'ಕನ್ನಡಿಗರೇ ಹೆಚ್ಚಿರುವ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೂ ಸೇರ್ಪಡೆಯಾಗಿವೆ ಎಂಬುದನ್ನು ಮರೆಯಬಾರದು'

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ಗೆ ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿರುವುದು ಹೀಗೆ.

ಮಹಾರಾಷ್ಟ್ರದ ಸಂಸ್ಥಾಪನಾ ದಿನದ ಅಂಗವಾಗಿ ಭಾನುವಾರ ಪುಣೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಜಿತ್ ಪವಾರ್, 'ಮಹಾರಾಷ್ಟ್ರ ಸಂಸ್ಥಾಪನೆಯ 62ನೇ ವರ್ಷದ ಸಂಭ್ರಮ ಆಚರಿಸುತ್ತಿದ್ದೇವೆ. ಆದರೆ ಮರಾಠಿ ಮಾತನಾಡುವವರು ಇರುವ ಕರ್ನಾಟಕದ ಬೀದರ್, ಭಾಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಇತರೆ ಜಿಲ್ಲೆಗಳ ಗ್ರಾಮಗಳನ್ನು ರಾಜ್ಯದ ಜೊತೆ ವಿಲೀನಗೊಳಿಸಲಾಗದಿರುವುದಕ್ಕೆ ಪಶ್ಚಾತ್ತಾಪವಿದೆ' ಎಂದು ಹೇಳಿಕೆ ನೀಡಿದ್ದರು. ಹಾಗೆಯೇ,ಕರ್ನಾಟಕದ ಗಡಿ ಭಾಗಗಳ ಮರಾಠಿ ಭಾಷಿಕರು ಇರುವಸ್ಥಳಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಹೋರಾಟಕ್ಕೆ ತಮ್ಮ ಬೆಂಬಲ ಮುಂದುವರಿಯಲಿದೆ ಎಂದಿದ್ದರು.

ಈ ಕುರಿತು ಟ್ವಿಟರ್‌ನಲ್ಲಿ ಕಿಡಿಕಾರಿರುವ ಕುಮಾರಸ್ವಾಮಿ ಸರಣಿ ಟ್ವೀಟ್‌ಗಳನ್ನು ಮಾಡಿ ಚಾಟಿ ಬೀಸಿದ್ದಾರೆ.

'ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ. ಹಿಂದೆ; ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ್ದ ಅವರು, ಪುನಃ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಖಂಡನೀಯ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, 'ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಭಾಷಿಗರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ನಮ್ಮ ಸರಕಾರದ ಬೆಂಬಲವಿದೆ ಎಂದು‌ ಪುಣೆಯಲ್ಲಿ ಅವರು ಇಂದು ʼಅಪರಿಪಕ್ವʼ ಹೇಳಿಕೆ ನೀಡಿದ್ದಾರೆ.‌ಹಾಗೆ ನೋಡಿದರೆ, ಕನ್ನಡಿಗರೇ ಹೆಚ್ಚಾಗಿರುವ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೂ ಸೇರ್ಪಡೆಯಾಗಿವೆ ಎಂಬುದನ್ನು ಪವಾರ್‌ ಮರೆಯಬಾರದು' ಎಂದು ಎಚ್ಚರಿಸಿದ್ದಾರೆ.

'1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. 1950ರಲ್ಲಿ ಭಾರತ ಗಣರಾಜ್ಯವಾಗಿ ಅವತರಿಸಿತು. ಅದಾದ ಮೇಲೆ ಭಾಷಾವಾರು ಪ್ರಾಂತ್ಯಗಳು ರಾಜ್ಯಗಳಾದವು. ಸ್ವಾತಂತ್ರ್ಯದ ʼಅಮೃತ ಮಹೋತ್ಸವʼ ಈ ಕಾಲದಲ್ಲೂ ಅಜಿತ್‌ ಪವಾರ್‌ ಇನ್ನೂ ಗಡಿ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದರೆ, ಅವರ ಮಿದುಳು ಹಿಮ್ಮುಖವಾಗಿ ಚಲಿಸುತ್ತಿರಬೇಕಷ್ಟೇ' ಎಂದು ಛೇಡಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ತಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಗಡಿ ಜನರ ಬಗ್ಗೆ ಕಳಕಳಿಯೂ ಇಲ್ಲ. ಎಂದೋ ಮುಗಿದ ವಿಷಯ ಇಟ್ಟುಕೊಂಡು 'ರಾಜಕೀಯ ಪ್ರಹಸನ' ನಡೆಸುತ್ತಿದ್ದಾರಷ್ಟೇ. ʼಚೀನಾ ಮನಃಸ್ಥಿತಿಯ ಆಕ್ರಮಣಶೀಲʼ ಮನೋಭಾವದಿಂದ ಅಜಿತ್‌ ಪವಾರ್‌ ಹೊರಬರುವುದು ಒಳ್ಳೆಯದು' ಎಂದು ಸಲಹೆ ನೀಡಿದ್ದಾರೆ.

'ಸಹೋದರತ್ವ ಭಾವದಿಂದ ಬದುಕಬೇಕಾದ ಎರಡೂ ಭಾಷೆಗಳ ಜನರನ್ನು ದಿಕ್ಕು ತಪ್ಪಿಸಲು ಮತ್ತೆಮತ್ತೆ ಗಡಿ ವಿಷಯ ಕೆದಕುತ್ತಾ, ಆ ಗಡಿ ಪ್ರದೇಶಗಳು ಅಭಿವೃದ್ಧಿಯನ್ನೇ ಕಾಣದಂತೆ ನೋಡಿಕೊಳ್ಳುವ ರಾಜಕೀಯ ಹುನ್ನಾರವಷ್ಟೇ ಇದು. ಇಂಥ ಪ್ರವೃತ್ತಿ ಭಾರತದ ಐಕ್ಯತೆ ಮತ್ತು ಒಕ್ಕೂಟ ವ್ಯವಸ್ಥೆಗೇ ಗಂಡಾಂತರಕಾರಿ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'2006ರಲ್ಲಿ ಕೇಂದ್ರದ ಯುಪಿಎ ಸರಕಾರದಲ್ಲಿ ಗೃಹ ಸಚಿವರಾಗಿದ್ದ ತಮ್ಮದೇ ರಾಜ್ಯದ ನಾಯಕರನ್ನು 'ಕೀಲಿಕೈ' ಮಾಡಿಕೊಂಡು ಇದೇ ಅಜಿತ್ ಪವಾರ್ ಅವರಂಥ ನಾಯಕರು ನಡೆಸಿದ ಕಿತಾಪತಿ ಕಾರಣಕ್ಕೆ, ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾನು, ಅವರೆಲ್ಲರಿಗೂ ಸಡ್ಡು ಹೊಡೆದು ಬೆಳಗಾವಿಯಲ್ಲಿ 'ಸುವರ್ಣ ವಿಧಾನಸೌಧ' ನಿರ್ಮಿಸುವ ಐತಿಹಾಸಿಕ ನಿರ್ಧಾರ ಕೈಗೊಂಡೆ' ಎಂದು ಹೇಳಿಕೊಂಡಿದ್ದಾರೆ.

'ಬೆಳಗಾವಿ ಬಗ್ಗೆ ಬೇಳೆ ಬೇಯಿಸಿಕೊಳ್ಳುವ 'ಒಡಕು ಪ್ರವೃತ್ತಿ'ಯನ್ನು ಮರಾಠಿ ನಾಯಕರು ಬಿಡಬೇಕು. ಇಲ್ಲವಾದರೆ, ದೇಶದ ಉದ್ದಗಲಕ್ಕೂ ಈಗಲೂ ಬೂದಿಮುಚ್ಚಿದ ಕೆಂಡದಂತಿರುವ ಇಂಥ ಸೂಕ್ಷ್ಮ ವಿಷಯಗಳು ಮುಂಚೂಣಿಗೆ ಬಂದು ದೇಶವೇ ಛಿದ್ರವಾಗುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಂಡು, ಕೇಂದ್ರವು ಇಂಥ 'ಆಕ್ರಮಣಶೀಲ' ಮನಃಸ್ಥಿತಿಯುಳ್ಳವರ ಕಿವಿ ಹಿಂಡಬೇಕು' ಎಂದು ಆಗ್ರಹಿಸಿದ್ದಾರೆ.

ಹಾಗೆಯೇ, 'ಎಲ್ಲ ಭಾಷಿಕರು ಎಲ್ಲ ರಾಜ್ಯಗಳಲ್ಲೂ ಇದ್ದಾರೆ. ಕರ್ನಾಟಕದಲ್ಲಿ ಮರಾಠಿ ಭಾಷಿಕರಿದ್ದಾರೆ. ಅವರ ಒಳಿತಿನ ಬಗ್ಗೆ ಅಜಿತ್ ಪವಾರ್ ಮಾತನಾಡಲಿ. ನಮ್ಮ ರಾಜ್ಯ ಸರಕಾರದ ಜತೆಯೂ ಚರ್ಚಿಸಲಿ. ಈ ನೆಲದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡಿಗರೇ ಎನ್ನುವ ವಿಶಾಲ ಭಾವ ನಮ್ಮದು. ಇದನ್ನು ಪವಾರ್ ಅರ್ಥ ಮಾಡಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT