ಬೆಂಗಳೂರು: ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಪ್ರಧಾನ ಕಚೇರಿಯಿಂದಲೇಹಿಜಾಬ್ ವಿವಾದ ಹುಟ್ಟಿಕೊಂಡಿದೆ’ ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ.
ಈ ಕುರಿತು ಗುರುವಾರ ಸರಣಿ ಟ್ವೀಟ್ಗಳನ್ನು ಮಾಡಿರುವ ಬಿಜೆಪಿ, ‘ಹಿಜಾಬ್ ಪರವಾಗಿ ವಾದಿಸಲು ಕಾಂಗ್ರೆಸ್ ಪಕ್ಷದ ವತಿಯಿಂದಲೇ ನ್ಯಾಯವಾದಿಗಳನ್ನು ನೇಮಕ ಮಾಡಲಾಗಿತ್ತು.ಈಗ ತೀರ್ಪು ಬಂದ ನಂತರ ಅದರ ವಿರುದ್ಧ ಹೋರಾಟ ನಡೆಸುವುದು ಸಂವಿಧಾನಬದ್ಧ ಹಕ್ಕು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಾದರೆ, ಹಿಜಾಬ್ ವಿವಾದ ಕೆಪಿಸಿಸಿ ಕಚೇರಿಯಲ್ಲಿಯೇ ಹುಟ್ಟಿಕೊಂಡಿದ್ದು ಎನ್ನಲು ಬೇರೇನು ಪುರಾವೆ ಬೇಕು?’ ಎಂದು ಪ್ರಶ್ನಿಸಿದೆ.
‘ಹೈಕೋರ್ಟ್ ಆದೇಶದಲ್ಲಿ ಅಸಮಾಧಾನವಿದ್ದರೆ, ಸುಪ್ರೀಂ ಕೋರ್ಟ್ಗೆ ಹೋಗಬಹುದು. ಅದನ್ನು ಬಿಟ್ಟು ಬಂದ್ ಮಾಡುವುದು, ಬಂದ್ ಮಾಡುವುದನ್ನು ಬೆಂಬಲಿಸುವುದು ನ್ಯಾಯಾಂಗ ನಿಂದನೆ ಅಲ್ಲವೇ?ಬಂದ್ಗೆ ಬೆಂಬಲ ಸೂಚಿಸಿರುವ ಸಿದ್ದರಾಮಯ್ಯ ಅವರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಹಿಜಾಬ್ ಪರವಾಗಿ ವಾದಿಸಲು ಕಾಂಗ್ರೆಸ್ ಪಕ್ಷದ ವತಿಯಿಂದಲೇ ನ್ಯಾಯವಾದಿಗಳನ್ನು ನೇಮಕ ಮಾಡಲಾಗಿತ್ತು.
— BJP Karnataka (@BJP4Karnataka) March 17, 2022
ಈಗ ತೀರ್ಪು ಬಂದ ನಂತರ ಹೋರಾಟ ನಡೆಸುವುದು ಸಂವಿಧಾನಬದ್ಧ ಹಕ್ಕು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.
ಹಿಜಾಬ್ ವಿವಾದ ಕೆಪಿಸಿಸಿ ಕಛೇರಿಯಲ್ಲಿ ಹುಟ್ಟಿಕೊಂಡಿದ್ದು ಎನ್ನಲು ಬೇರೇನು ಪುರಾವೆ ಬೇಕು?#ಜನವಿರೋಧಿಕಾಂಗ್ರೆಸ್
‘ನ್ಯಾಯಾಲಯವು ಶಾಲಾ–ಕಾಲೇಜುಗಳಲ್ಲಿ ಹಿಜಾಬ್ ಧರಿಸಬಾರದೆಂದು ಆದೇಶ ನೀಡಿದೆ.ಇದನ್ನು ವಿರೋಧಿಸಿ ಕೆಲವು ಕಡೆ ಬಂದ್ ಮಾಡಲಾಗಿದೆ. ಬಂದ್ ಮಾಡುವುದು ಅವರ ಹಕ್ಕು ಎಂದು ಸದನದೊಳಗೆಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.ಪ್ರತಿಭಟನೆ, ಬಂದ್ ಹಿಂದೆ ಕಾಂಗ್ರೆಸ್ ಕೈವಾಡವಿರುವುದು ಸಿದ್ದರಾಮಯ್ಯ ಮಾತುಗಳಲ್ಲಿ ಸ್ಪಷ್ಟವಾಗಿದೆ’ ಎಂದು ಬಿಜೆಪಿ ಹೇಳಿದೆ.
ಇನ್ನೊಂದೆಡೆ ಸಿದ್ದರಾಮಯ್ಯ ಸೋನಿಯಾ ಗಾಂಧಿ ನಾಯಕತ್ವ ಸಮರ್ಥಿಸಿಕೊಂಡಿರುವುದಕ್ಕೆ ಕುಹಕವಾಡಿರುವ ಬಿಜೆಪಿ, ‘ಸಿದ್ದರಾಮಯ್ಯ ಅವರೇ, ನಿಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ಮೊದಲು ಶುಚಿಗೊಳಿಸಿಕೊಳ್ಳಿ.ಸೋನಿಯಾ ಗಾಂಧಿ ನಾಯಕತ್ವದ ವಿರುದ್ಧ ಧ್ವನಿ ಎತ್ತಿರುವವರು ನಿಮಗಿಂತಲೂ ಮೊದಲು ಕಾಂಗ್ರೆಸ್ ಒಳಮನೆಯ ರಾಜಕಾರಣ ಕಂಡವರು. ನಿಮ್ಮ ಜಗಳಕ್ಕೆ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ ಎಂಬ ಸಬೂಬು ನೀಡುವುದು ಹಾಸ್ಯಾಸ್ಪದ’ ಎಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.