ಬೆಂಗಳೂರು: ರಾಜ್ಯ ಸರ್ಕಾರ ಬೋಗಸ್ ಬಜೆಟ್ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಲವು ಕಾಮಗಾರಿಗಳ ₹75 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರ ಗುತ್ತಿಗೆದಾರರೊಂದಿಗೆ ಚೌಕಾಸಿ ವ್ಯವಹಾರಕ್ಕಿಳಿದಿದೆಯೇ?, ಬೊಮ್ಮಾಯಿ ಅವರೇ, ಇದೇನಾ ನಿಮ್ಮ ಆರ್ಥಿಕ ಶಿಸ್ತು’ ಎಂದು ಪ್ರಶ್ನಿಸಿದೆ.
‘ಬೋಗಸ್ ಬಜೆಟ್ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಬಿಜೆಪಿ ಸರ್ಕಾರ ಯೋಜನೆಗಳಿಗೆ, ಕಾಮಗಾರಿಗಳಿಗೆ ಹಣ ನೀಡುವ ಯೋಗ್ಯತೆಯನ್ನೇ ಉಳಿಸಿಕೊಂಡಿಲ್ಲ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಮನೆ ಬಾಗಿಲಿಗೆ ಕಂದಾಯ ಇಲಾಖೆ ಎಂಬ ಪ್ರಚಾರದ ಕಾರ್ಯಕ್ರಮ ಹಮ್ಮಿಕೊಂಡಿರುವ ಸರ್ಕಾರ ವಾಸ್ತವದ ಸಮಸ್ಯೆಗಳನ್ನು ಬಗೆಹರಿಸಲಿ. ಸರ್ಕಾರಿ ಕಚೇರಿಗಳಲ್ಲಿ ದಾಖಲೆಗಳನ್ನು ಪಡೆಯಲು ಹಲವು ಅಡೆತಡೆಗಳು ಸೃಷ್ಟಿಯಾಗಿವೆ. ತಾಂತ್ರಿಕ ಲೋಪಗಳು ಬಡವರ ಕಚೇರಿ ಅಲೆದಾಟವನ್ನು ಹೆಚ್ಚಿಸಿದೆ. ಸರ್ಕಾರ ತಳಮಟ್ಟದ ಸಮಸ್ಯೆಗಳನ್ನು ಗಮನಿಸಿ ಬಗೆಹರಿಸುವ ಕೆಲಸ ಮಾಡಬೇಕಿದೆ ಎಂದು ಕಾಂಗ್ರೆಸ್ ಆಗ್ರಹಿಸಿದೆ.