ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಸಂದೇಶ ನೀಡಲಿದೆ ರಾಜ್ಯದ ಚುನಾವಣೆ: ಖರ್ಗೆ

Last Updated 20 ಮಾರ್ಚ್ 2023, 12:26 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆ ಇಡೀ ದೇಶಕ್ಕೆ ದೊಡ್ಡ ಸಂದೇಶ ನೀಡಲಿದೆ. ಯುವಜನರು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

ನಗರದಲ್ಲಿ ಸೋಮವಾರ ಕಾಂಗ್ರೆಸ್‌ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಗಾಂಧೀಜಿ ಅವರು ನೂರು ವರ್ಷಗಳ ಹಿಂದೆ ಇದೇ ನೆಲದಲ್ಲಿ; ಸಶಕ್ತ ಯುವಜನರ, ಸ್ವಾವಲಂಬಿ ರೈತರ, ಸಮಾನತೆ ಹೊಂದಿದ ಮಹಿಳೆಯರ ದೇಶದ ಕನಸು ಕಂಡಿದ್ದರು. ಇದೇ ನೆಲದಲ್ಲಿ ಕಾಂಗ್ರೆಸ್‌ ಅಧ್ಯಕ್ಷನಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಜಿಲ್ಲೆಯ ಎಲ್ಲ 18 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಿಸಿ’ ಎಂದರು.

‘ಗುತ್ತಿಗೆದಾರರ ಸಂಘದವರು ಕಮಿಷನ್‌ ದಾಖಲೆ ನೀಡಿದರೂ ಮೋದಿ, ಶಾ ಮೌನವಾಗಿದ್ದಾರೆ. ಮಹಿಳೆಯೊಬ್ಬರ ಮೇಲಿನ ಅತ್ಯಾಚಾರದ ಬಗ್ಗೆ ರಾಹುಲ್‌ ಗಾಂಧಿ ಅವರು ಮಾತನಾಡಿದ್ದಕ್ಕೆ ದಾಖಲೆ ಕೊಡಿ ಎಂದು ಮನೆಗೆ ಪೊಲೀಸರನ್ನು ಕಳಿಸಿದ್ದಾರೆ’ ಎಂದರು.

‘ನೀವು ನಮ್ಮನ್ನು ಮಣ್ಣಲ್ಲಿ ಮುಚ್ಚಿದರೂ ಮೊಳೆತು ಮೇಲೆ ಬರುತ್ತೇವೆ. ನಿಮ್ಮ ಪೊಲೀಸರು, ಸಿಬಿಐ, ಇಡಿ ಯಾರೂ ರಾಹುಲ್‌ ಅವರನ್ನು ಹೆದರಿಸಲು ಆಗುವುದಿಲ್ಲ. ಅವರನ್ನು ಜೈಲಿಗೆ ಹಾಕಿದರೂ ಕಿಂಚಿತ್ತೂ ಭಯ ಪಡುವವರಲ್ಲ’ ಎಂದೂ ಹೇಳಿದರು.

‘ಖರ್ಗೆ ಅವರ ರಿಮೋಟ್‌ ಕಂಟ್ರೋಲ್‌ ಬೇರೊಬ್ಬರ ಕೈಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗಾದರೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ರಿಮೋಟ್‌ ಕಂಟ್ರೋಲ್‌ ಯಾರ ಬಳಿ ಇದೆ ಸ್ವಾಮಿ; ಉತ್ತರ ಕೊಡಿ’ ಎಂದೂ ಪ್ರಶ್ನಿಸಿದರು.

‘ದೇಶದಲ್ಲಿ ಇನ್ನೂ 50 ಲಕ್ಷ ಹುದ್ದೆಗಳು ಖಾಲಿ ಇವೆ. ಇನ್ನೊಂದೆಡೆ ನಮ್ಮ ಯುವಜನರು ದಿನದ ಊಟಕ್ಕೂ ಪರದಾಡುವಂತಾಗಿದೆ. ದೇಶದಲ್ಲಿ ಬಡತನವಿದೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಇದೆ ಎಂದು ನಾವು ಸತ್ಯ ಹೇಳಿದರೂ ಸಹಿಸಿಕೊಳ್ಳುವುದಿಲ್ಲ. ಆದರೆ, ನೂರು ಸುಳ್ಳುಗಳನ್ನು ಅವರು ನೂರು ಬಾರಿ ಹೇಳುತ್ತಾರೆ’ ಎಂದೂ ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT