ಬೆಂಗಳೂರು: ಬಿಜೆಪಿಯವರು ರಾಜ್ಯದಲ್ಲಿ ಕೋಮು ದ್ವೇಷ ಸೃಷ್ಟಿಸಿ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಈ ಕುರಿತು ಡಿ.ಕೆ.ಶಿವಕುಮಾರ್ ಮಾತನಾಡಿರುವ ವಿಡಿಯೊವನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
‘ಮಾವು ಮಾರಾಟ ವಿವಾದ ಬಿಜೆಪಿಯ ರಾಜಕೀಯ ಅಜೆಂಡಾವಾಗಿದೆ. ಬಿಜೆಪಿ ರೈತರ ಬದುಕಿಗೆ ಸಮಾಧಿ ಕಟ್ಟಲು ಹೊರಟಿದೆ’ ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
ಈ ವಿವಾದದಿಂದ ರೈತರಿಗೆ ನಷ್ಟವಾದರೆ ಸರ್ಕಾರ ಭರಿಸುತ್ತದೆಯೇ? ಬಿಜೆಪಿ ಮತ ಧ್ರುವೀಕರಣಕ್ಕಾಗಿ ಈ ರೀತಿ ಮಾಡುತ್ತಿದೆ. ಬಿಜೆಪಿಯವರು ಜನರನ್ನು ದಿಕ್ಕು ತಪ್ಪಿಸಿ, ಕೋಮು ದ್ವೇಷ ಸೃಷ್ಟಿಸಿ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಹಿಜಾಬ್, ಹಲಾಲ್ –ಜಟ್ಕಾ, ಆಜಾನ್ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಮಾವು ಮಾರಾಟ ಕುರಿತಾದಚರ್ಚೆ ಮುನ್ನೆಲೆಗೆ ಬಂದಿದೆ. ಇದೇ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಪರಸ್ಪರ ಕೆಸರೆರಚಾಟ ಜೋರಾಗಿದೆ.
ಮಾವು ಮಾರಾಟ ವಿವಾದ ಬಿಜೆಪಿಯ ರಾಜಕೀಯ ಅಜೆಂಡಾ. ಬಿಜೆಪಿ ರೈತರ ಬದುಕಿಗೆ ಸಮಾಧಿ ಕಟ್ಟಲು ಹೊರಟಿದೆ.
ವಿವಾದದಿಂದ ರೈತರಿಗೆ ನಷ್ಟವಾದರೆ ಸರ್ಕಾರ ಭರಿಸುತ್ತದೆಯೇ? ಬಿಜೆಪಿ ಮತ ಧ್ರುವೀಕರಣಕ್ಕಾಗಿ ಈ ರೀತಿ ಮಾಡುತ್ತಿದೆ.