ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ದತ್ತಾಂಶ ಕಳವು ಪ‍್ರಕರಣದ ಹಿಂದೆ ದೊಡ್ಡ ಸಂಚಿದೆ: ಡಿ.ಕೆ. ಶಿವಕುಮಾರ್‌

Last Updated 26 ನವೆಂಬರ್ 2022, 8:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ದತ್ತಾಂಶ ಕಳವು ಪ‍್ರಕರಣದ ಹಿಂದೆ ದೊಡ್ಡ ಸಂಚೇ ಇದೆ. ಈ ಬಗ್ಗೆ ಚುನಾವಣಾ ಆಯೋಗ ಅಥವಾ ನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖೆ ಆಗಬೇಕು. ಅವರ ಉಸ್ತುವಾರಿಯಲ್ಲೇ ಚುನಾವಣೆಯನ್ನೂ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಮತದಾರರ ಮಾಹಿತಿ ಕಳವು ವಿಚಾರವಾಗಿ ನಾವು ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗವು ಚುನಾವಣಾಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದೆ’ ಎಂದರು.

‘ಸಚಿವರು, ಶಾಸಕರಿಲ್ಲದೆ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಎಲ್ಲ 28 ಕ್ಷೇತ್ರಗಳಲ್ಲಿ ಈ ಅಕ್ರಮ ನಡೆದಿದೆ. ಎಲ್ಲ ಕಡೆ ತನಿಖೆ ಆಗಬೇಕು. ಇಲ್ಲೆಲ್ಲ ಮತದಾರರ ಪಟ್ಟಿ ಮರುಪರಿಷ್ಕರಣೆ ಆಗಬೇಕು’ ಎಂದರು.

‘ಯಾವುದೇ ಮತವನ್ನು ಸೇರಿಸುವಾಗ ಅಥವಾ ತೆಗೆಯುವಾಗ ಆಯಾ ವ್ಯಕ್ತಿಯ ಅರ್ಜಿ ಇರಬೇಕು. ಬಿಎಲ್ಒಗಳನ್ನು ಯಾರು ನೇಮಕ ಮಾಡಿದ್ದರು? ಈ ಬಿಎಲ್ಒಗಳನ್ನು ಕೇವಲ 3 ಕ್ಷೇತ್ರ ಚುನಾವಣಾಧಿಕಾರಿಗಳು ಮಾತ್ರ ಮಾಡಿಲ್ಲ. ಎಲ್ಲ 28 ಕ್ಷೇತ್ರಗಳ ಚುನಾವಣಾಧಿಕಾರಿಗಳೂ ಮಾಡಿದ್ದಾರೆ. ಸುಮಾರು 6-7 ಸಾವಿರ ಮಂದಿಗೆ ಈ ಬಿಎಲ್ಒ ಗುರುತಿನ ಚೀಟಿ ಕೊಟ್ಟಿದ್ದಾರೆ. ಇದರಲ್ಲಿ ಕೆಲವರು ಅಮಾಯಕರಿದ್ದು, ಕೆಲಸಕ್ಕೆ ಎಂದು ಸೇರಿದ್ದಾರೆ’ ಎಂದರು.

‘ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು, ವ್ಯಕ್ತಿ ಸತ್ತಿದ್ದರೂ ಪ್ರಮಾಣ ಪತ್ರ ನೀಡಿಲ್ಲ ಎಂದರೆ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿ ಪರಿಶೀಲಿಸಬೇಕು. ಮನೆ ಬದಲಾವಣೆ ಮಾಡಿದ್ದರೂ ಸ್ಥಳಕ್ಕೆ ಹೋಗಿ ಪರಿಶೀಲಿಸಬೇಕು. ಆದರೆ, ಇವರು ಯಾವುದೋ ಸಂಸ್ಥೆ, ಶಾಸಕರು ಹಾಗೂ ಸಚಿವರ ಕಚೇರಿಯಲ್ಲಿ ಕುಳಿತು ಅವರಿಗೆ ಬೇಕಾದಂತೆ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಸಚಿವರೊಬ್ಬರು ಆರಂಭದಲ್ಲಿ ನನಗೆ ಈ ಸಂಸ್ಥೆ ಗೊತ್ತೇ ಇಲ್ಲ ಎಂದರು. ನಂತರ ಈ ಸಂಸ್ಥೆ ಗೊತ್ತಿದೆ, ಆದರೆ, ದುರ್ಬಳಕೆ ಮಾಡಿಕೊಂಡಿಲ್ಲ ಎಂದರು. ಸಚಿವರು ಹಾಗೂ ಈ ಸಂಸ್ಥೆ ನಿರ್ದೇಶಕರ ಮಧ್ಯೆ ದೂರವಾಣಿ ಮಾತುಕತೆ ಎಲ್ಲವೂ ಇದೆ. ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಸತ್ಯಾಂಶ ಹೊರಬರಲಿ’ ಎಂದೂ ಒತ್ತಾಯಿಸಿದರು.

‘ಪ್ರತಿ ಕ್ಷೇತ್ರದಲ್ಲೂ ಮತದಾರರ ಸೇರ್ಪಡೆ ಹಾಗೂ ಅಳಿಸಿರುವ ಪಟ್ಟಿ ಸಂಪೂರ್ಣವಾಗಿ ಮರು ಪರಿಷ್ಕರಣೆ ಆಗಬೇಕು. ಪ್ರತಿ ಮನೆಗೂ ಹೋಗಿ ಯಾರು ಸತ್ತಿದ್ದಾರೆ, ಯಾರು ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಿದ್ದಾರೆ ಎಂಬುದನ್ನು ನೋಡಿ, ಅಂಥವರ ಹೆಸರನ್ನು ಪಟ್ಟಿಯಿಂದ ಕೈಬಿಡಲಿ. ಒಂದು ಕುಟುಂಬದ ಮತಗಳನ್ನು ಬೇರೆ, ಬೇರೆ ಬೂತ್‌ಗಳಿಗೆ ವರ್ಗಾವಣೆ ಮಾಡಬಾರದು. ಆ ಕೆಲಸವೂ ಇಲ್ಲಿ ನಡೆದಿದೆ. ಈ ಮತ ಕಳ್ಳತನ ವಿಚಾರ ನಕಲಿ ನೋಟು ಮುದ್ರಣ ಮಾಡಿದಷ್ಟೇ ಅಪರಾಧ. ಇದಕ್ಕೆ ಜನರೇ ಶಿಕ್ಷೆ ನೀಡಬೇಕು. ಸರ್ಕಾರಿ ಅಧಿಕಾರಿಗಳ ಗುರುತಿನ ಚೀಟಿಯನ್ನು ಅನಧಿಕೃತವಾಗಿ ನೀಡುವುದು ಅಪರಾಧ. ಕಾಂಗ್ರೆಸ್ ಕಾಲದಲ್ಲಿ ಇದು ಆಗಿದ್ದರೆ ತನಿಖೆ ಮಾಡಲಿ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ’ ಎಂದರು.

‘ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟರ ಮತಗಳನ್ನು ತೆಗೆದುಹಾಕಲಾಗುತ್ತಿದೆ. ಆರ್‌.ಆರ್‌. ನಗರದಲ್ಲಿ ಗೌಡ ಎಂಬ ಹೆಸರಿದ್ದರೆ ಒಂದು ಹೆಸರು ಉಳಿಸಿಕೊಂಡು ಮೂರು ಹೆಸರು ತೆಗೆಯುತ್ತಾರೆ. ಇದರಲ್ಲಿ ಸಚಿವರು, ಶಾಸಕರು ಇದ್ದಾರೆ. ಶಾಸಕರ ಪತ್ರಗಳು ಈ ಸಂಸ್ಥೆಯ ಕಚೇರಿಯಲ್ಲಿ ಸಿಕ್ಕಿವೆ‘ ಎಂದರು.

ರಾಜ್ಯದಲ್ಲಿ ಏಕರೂಪ ನಾಗರಿಕ ಕಾಯ್ದೆ ಜಾರಿಗೆ ಸಿದ್ಧ ಎಂಬ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಈ ವಿಚಾರವಾಗಿ ಈಗ ಮಾತನಾಡುವುದಿಲ್ಲ. ರಾಜಕೀಯ ಪಕ್ಷವಾಗಿ ನಮ್ಮ ನಿರ್ಧಾರ ಏನೆಂದು ಆ ಮೇಲೆ ತಿಳಿಸುತ್ತೇವೆ’ ಎಂದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT