ಬೆಂಗಳೂರು:ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಆರಂಭಿಸಿರುವ ಕಲಿಕಾ ಚೇತರಿಕೆಯ ಹಾಳೆಗಳಿಗೂ ಸರ್ಕಾರ ಅನುದಾನದ ಕೊರತೆಯಾಗಿದೆ.
ಶಿಕ್ಷಕರೇಕಲಿಕಾ ಹಾಳೆಗಳ ಝೆರಾಕ್ಸ್ ಪ್ರತಿ ಮಾಡಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಂತೆ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಸೂಚಿಸಿದೆ.
‘ವಿದ್ಯಾ ಪ್ರವೇಶ– ಕಲಿಕಾ ಚೇತರಿಕೆ’ಯ ಕಲಿಕಾ ಹಾಳೆಗಳನ್ನು ಝೆರಾಕ್ಸ್ ಮಾಡಿಸಲು ದಾನಿಗಳ ಬಳಿ ಹಣ ಸಂಗ್ರಹಿಸಿ ಎಂದು ಸಮಗ್ರ ಶಿಕ್ಷಣ ಯೋಜನೆ ರಾಜ್ಯ ನಿರ್ದೇಶಕರು ಜೂ. 27ರಂದು ಸುತ್ತೋಲೆ ಹೊರಡಿಸಿದ್ದಾರೆ.
ಕೋವಿಡ್ ಕಾರಣಕ್ಕೆ ವಿದ್ಯಾರ್ಥಿಗಳ ಕಲಿಕಾ ನಷ್ಟ ಸರಿದೂಗಿಸಲು1 ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳ ‘ವಿದ್ಯಾಪ್ರವೇಶ–ಕಲಿಕಾ ಚೇತರಿಕೆ’ ಕಾರ್ಯಕ್ರಮ ಆರಂಭಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿ ಸುವುದು ಕಾರ್ಯಕ್ರಮದ ಉದ್ದೇಶ. 1ರಿಂದ 3ನೇ ತರಗತಿಯವರೆಗೆ ಮೊದಲ ಮೂರು ತಿಂಗಳಿಗೆ ವಿದ್ಯಾಪ್ರವೇಶ
ಅನುಷ್ಠಾನಗೊಳಿಸಲಾಗಿದೆ.
ಈ ಕಾರ್ಯಕ್ರಮದ ಭಾಗವಾಗಿ ಶಿಕ್ಷಣಇಲಾಖೆಯ ವೆಬ್ಸೈಟ್ನಲ್ಲಿ ಶಿಕ್ಷಕರ ಕೈಪಿಡಿ ಹಾಗೂ ಮಕ್ಕಳ ಕಲಿಕಾ ಹಾಳೆಗಳ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದೆ. ‘ದಾನಿಗಳ ನೆರವಿನಲ್ಲಿ ಈ ಹಾಳೆಗಳನ್ನು ಝೆರಾಕ್ಸ್ ಮಾಡಿಸಿ ಮಕ್ಕಳಿಂದ ಕಲಿಕಾ ಚಟುವಟಿಕೆಗಳನ್ನು ಮಾಡಿಸಬೇಕು’ ಎಂದು ಸೂಚಿಸಿದೆ.
‘ಶಾಲಾನುದಾನ ಅಥವಾ ಎಸ್ಡಿ ಎಂಸಿ ಅನುದಾನ ಲಭ್ಯ ಇದ್ದರೆ ಅಥವಾ ಯಾವುದೇ ಸರ್ಕಾರದ ಅನುದಾನವನ್ನು ಸಹ ಝೆರಾಕ್ಸ್ಗೆ ಬಳಸಬಹುದಾಗಿದೆ. ಒಂದು ತರಗತಿ ಅಥವಾ ವಿಭಾಗಕ್ಕೆ ಒಂದು ವಿಷಯಕ್ಕೆ ಒಂದು ಪ್ರತಿ ಮಾತ್ರ ಝೆರಾಕ್ಸ್ ಪ್ರತಿ ಸಿದ್ಧಪಡಿಸಿ, ಎಲ್ಲ ಮಕ್ಕಳಿಂದ ಕಲಿಕಾ ಚಟುವಟಿಕೆ ಮಾಡಿಸಬೇಕು’ ನ್ನಲಾಗಿದೆ.
‘ಕಲಿಕಾ ಹಾಳೆಯ ಮುದ್ರಣ ಪ್ರತಿ ಗಳನ್ನು ನೀಡುವುದಾಗಿ ಇಲಾಖೆ ತಿಳಿಸಿದೆ. ಆದರೆ, ಇನ್ನೂ ಕೈ ಸೇರಿಲ್ಲ. ಸದ್ಯ ಒಂದು ವಿಷಯದ ಝೆರಾಕ್ಸ್ಗೆ ದಾನಿಗಳನ್ನು ಹುಡುಕುತ್ತ ಹೋಗಬೇಕಾದ ಪರಿಸ್ಥಿತಿ ಇದೆ. ಬಹುತೇಕ ಕಡೆಗಳಲ್ಲಿ ಶಿಕ್ಷಕರೇ ಝೆರಾಕ್ಸ್ಗೆ ಖರ್ಚು ಮಾಡುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸಿದ ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಒಂದು ತರಗತಿಗೆ ಒಂದು ಪ್ರತಿ ಝೆರಾಕ್ಸ್ ಮಾಡಿಸಿ ಕಲಿಸುವುದಾದರೂ ಹೇಗೆ? ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ಝೆರಾಕ್ಸ್ ₹800 ಅನ್ನು ಶಿಕ್ಷಕರೇ ಭರಿಸಬೇಕಿದೆ ಎಂದರು.
ಹಾಳೆಗಳಲ್ಲಿ ಏನಿದೆ?
ಮಕ್ಕಳು ತ್ವರಿತಗತಿಯಲ್ಲಿ ಮತ್ತು ಸುಲಭವಾಗಿ ಕಲಿಯಲು ಅನುಕೂಲವಾಗುವಂತೆ ರೂಪಿಸಿರುವ ವರ್ಕ್ಶೀಟ್ಗಳೇ ಕಲಿಕಾ ಚೇತರಿಕೆಯ ಹಾಳೆಗಳು ಎಂದು ಶಿಕ್ಷಕರು ವಿವರಿಸಿದ್ದಾರೆ. ಚಿತ್ರಗಳ ಸಮೇತ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದರಿಂದ ಕಲಿಕೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.