ನೆಲಮಂಗಲ: ಅಮೆರಿಕದಲ್ಲಿ ಟ್ರಂಪ್ ಅಧಿಕಾರ ಕಳೆದುಕೊಂಡು ನಿರ್ನಾಮ ಆಗಿದ್ದಾರೆ. ರಷ್ಯಾದಲ್ಲಿ ಪುಟಿನ್ ವಿರುದ್ಧ ಜನ ದಂಗೆ ಎದ್ದಿದ್ದಾರೆ. ಇದೇ ಗತಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಬರಲಿದೆ ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.
ಬೆಲೆ ಏರಿಕೆ ಹಾಗೂ ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ’ರೈತರ ಮೇಲೆ ದೇಶದ್ರೋಹದ ಕೇಸುಗಳನ್ನು ದಾಖಲಿಸಲಾಗುತ್ತಿದೆ. ಸರ್ಕಾರದ ಉದ್ದಿಮೆಗಳನ್ನು ಅಂಬಾನಿ ಅದಾನಿ ಹಾಗು ಖಾಸಗಿಯವರಿಗೆ ನೀಡಿದ್ದಾಯಿತು. ಈಗ ಕೃಷಿಯನ್ನೂ ಖಾಸಗಿ ಕಂಪನಿಗಳಿಗೆ ನೀಡುವ ಹುನ್ನಾರ ನಡೆದಿದೆ‘ ಎಂದರು.
ಮಾಜಿ ಸಚಿವ ಆಂಜನಮೂರ್ತಿ ಮಾತನಾಡಿ, ‘ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿದೆ‘ ಎಂದರು.
ಮುಖಂಡರಾದ ವಜ್ರಘಟ್ಟ ನಾಗರಾಜು, ಗೋಪಿ, ಎನ್.ಎಸ್.ಮೂರ್ತಿ (ಮಿಲ್ಟ್ರಿ ಮಾಮಾ), ದೀಪಕ್ ಕಿರಣ್, ಸಿದ್ದರಾಮಯ್ಯ, ರೈತ ಘಟಕದ ಎಚ್.ಪಿ.ಚೆಲುವರಾಜು, ಪ್ರದೀಪ್, ಪುರಸಭೆ ಮಾಜಿ ಅಧ್ಯಕ್ಷ ಆರ್.ಉಮಾಶಂಕರ್, ಯುವ ಕಾಂಗ್ರೆಸ್ ನ ನಾರಾಯಣಗೌಡ ಇದ್ದರು.