ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ನಾಪತ್ತೆಯಾಗಿದ್ದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ (80) ಅವರ ಮೃತದೇಹವು ಆರು ದಿನಗಳ ಬಳಿಕ ಮಂಗಳವಾರ ಪತ್ತೆಯಾಗಿದೆ. ಮನೆಯಿದ್ದ ಸ್ಥಳದಿಂದ ದೂರದ ಪ್ರತಾಪದಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹವು ಸಿಕ್ಕಿದೆ.
ಕಳೆದ ಆಗಸ್ಟ್ 8ರಂದು ಅವರ ಅಣ್ಣ ಆನಂದ ತೀರ್ಥ ಮೃತದೇಹ ಸಿಕ್ಕಿತ್ತು. ಶಾಂತಾ, ರವಿಕಿರಣ್ ಭಟ್, ಶ್ರೀನಿವಾಸ್ ಸುಳಿವು ಸಿಗಬೇಕಿದೆ.
ನಾರಾಯಣ ಆಚಾರ್ ನಿತ್ಯವೂ ಮನೆಯ ಅಟ್ಟದ ಮೇಲೆ ಮಲಗುತ್ತಿದ್ದರು. ಕುಸಿದ ಬೆಟ್ಟದ ಮಣ್ಣು ಸುಮಾರು 2.5 ಕಿ.ಮೀ ದೂರಕ್ಕೆ ಕೊಚ್ಚಿಕೊಂಡು ಹೋಗಿ ಪ್ರತಾಪಕ್ಕೆ ಹಾಕಿದೆ. ಬೆಟ್ಟ ಕುಸಿತದ ರಭಸ ಎಷ್ಟಿತ್ತು ಎಂಬುದು ಭಯ ಹುಟ್ಟಿಸುತ್ತಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ ಆರಂಭವಾಗಿದ್ದ ಶೋಧ ಕಾರ್ಯಾಚರಣೆ, ಅವರ ಮನೆಯಿದ್ದ ಸ್ಥಳದಲ್ಲಿ ಆಸುಪಾಸಿನಲ್ಲಿ ನಡೆಯುತ್ತಿತ್ತು. ಈ ಸ್ಥಳದಲ್ಲಿ ಯಾವುದೇ ಕುರುಹು ಸಿಕ್ಕಿರಲಿಲ್ಲ. ಕೊನೆಯಲ್ಲಿ ನೀರು ಹರಿಯುತ್ತಿದ್ದ ನಾಗತೀರ್ಥ ಎಂಬ ಸ್ಥಳದಲ್ಲಿ ಶೋಧ ಆರಂಭಿಸಿದಾಗ ಕಾರ್ಯಾಚರಣೆ ತಂಡಕ್ಕೆ ಕಾಲು ಬೆರಳು ಕಾಣಿಸಿವೆ. ಮಣ್ಣ ತೆರವು ಮಾಡಿದಾಗ ಮೃತದೇಹ ಸಿಕ್ಕಿದೆ.
ಭಾಗಮಂಡಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಅವರ ಸ್ವಂತ ಜಮೀನಿನಲ್ಲಿ ಮಂಗಳವಾರ ಸಂಜೆಯೇ ಅಂತ್ಯಸಂಸ್ಕಾರ ನೆರವೇರಿತು. ಪುತ್ರಿಯರಾದ ಶಾರದಾ, ನಮಿತಾ ಅವರ ಕಣ್ಣೀರು ಕೋಡಿಯಾಗಿ ಹರಿಯಿತು. ಮೊಮ್ಮಕ್ಕಳು, ಕುಟುಂಬಸ್ಥರೂ ಕಣ್ಣೀರು ಸುರಿಸಿದರು.
ಕಾರು, ಬೈಕ್ ಪತ್ತೆ:ಶೆಡ್ನಲ್ಲಿ ನಿಲ್ಲಿಸಿದ್ದ ಡಸ್ಟರ್, ಓಮ್ನಿ ಕಾರುಗಳು ಹಾಗೂ ಸ್ಕೂಟಿ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಸಿಕ್ಕಿದೆ. ಸಾಕು ನಾಯಿ ಕಳೇಬರ ಸಹ ಪತ್ತೆಯಾಗಿದೆ.
ಚುರುಕಾದ ಕಾರ್ಯಾಚರಣೆ:ಶೋಧ ಕಾರ್ಯವು ಚುರುಕಾಗಿದೆ. ಎರಡು ಹಿಟಾಚಿ ಯಂತ್ರಗಳು ಕುಸಿದು ಬಿದ್ದಿರುವ ಮಣ್ಣಿನ ರಾಶಿಯನ್ನು ಬಗೆದು ಹಾಕಿವೆ. ಮತ್ತೊಂದೆಡೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸ್ಥಳೀಯ ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿ ಮಳೆ, ಮಂಜು ಕವಿದ ವಾತಾವರಣದಲ್ಲಿ ಶೋಧ ನಡೆಸುತ್ತಿದ್ದಾರೆ.
ಕಳ್ಳರ ಕಾಟಕ್ಕೆ ಹೆದರಿದರೆ?:ನಾರಾಯಣ ಆಚಾರ್ ಕೃಷಿಕರೂ ಆಗಿದ್ದರು. ಮೂರು ಕಡೆ ಅಪಾರ ಕೃಷಿ ಜಮೀನು ಹೊಂದಿದ್ದರು. ಅದರಲ್ಲಿ ಕೃಷಿ ಸಹ ಮಾಡುತ್ತಿದ್ದರು.
‘ಘಟನೆ ನಡೆಯುವ ಮುನ್ನ ದಿನವೂ ಮನೆಯ ಹೆಂಚು ಹಾರಿಹೋಗಿತ್ತು. ನಾನೇ ದುರಸ್ತಿ ಪಡಿಸಿಕೊಟ್ಟು ಬಂದಿದ್ದೆ. ಮಳೆ ಹೆಚ್ಚಾಗಿದ್ದರಿಂದ ಎರಡು ದಿನದ ಮಟ್ಟಿಗೆ ಮನೆ ಖಾಲಿ ಮಾಡುವಂತೆ ಮನವಿ ಮಾಡಿದ್ದೆ. ಅವರು ನನ್ನ ಮಾತು ಕೇಳಲಿಲ್ಲ. ಕೃಷಿಕರಾಗಿದ್ದರಿಂದ ಮನೆಯಲ್ಲಿ ಏಲಕ್ಕಿ, ಕಾಳು ಮೆಣಸು ದಾಸ್ತಾನಿಟ್ಟಿದ್ದರು ಎಂಬ ಮಾಹಿತಿಯಿದೆ. ಒಂಟಿಮನೆ ತೊರೆದು ಹೋದರೆ, ಲಕ್ಷಾಂತರ ಮೌಲ್ಯದ ಬೆಳೆಯು ಕಳ್ಳರ ಪಾಲಾಗುವ ಆತಂಕವಿತ್ತು. ಮನೆ ಬಿಡದಿರಲು ಅದೂ ಸಹ ಕಾರಣ ಇರಬಹುದು’ ಎಂದು ಕಾರು ಚಾಲಕ ಜಯಂತ್ ನೋವು ತೋಡಿಕೊಂಡರು. ಏಲಕ್ಕಿ, ಕಾಳು ಮೆಣಸು, ಮನೆಯಲ್ಲಿದ್ದ ಚಿನ್ನಾಭರಣವೂ ಮಣ್ಣು ಪಾಲಾಗಿದೆ. ನಾರಾಯಣ ಆಚಾರ್ ಎಲ್ಲಿಗೆ ಹೋದರೂ ಜಯಂತ್ ಅವರೇ ಕಾರು ಚಾಲನೆ ಮಾಡಬೇಕಿತ್ತು.
ನಾರಾಯಣ ಆಚಾರ್ ಅವರು ಮಂಡಲ ಪಂಚಾಯಿತಿ ಅವಧಿಯಲ್ಲಿ ಭಾಗಮಂಡಲ ಮಂಡಲ ಪಂಚಾಯಿತಿ ಅಧ್ಯಕ್ಷರಾಗಿ, ಜೇನು ಕೃಷಿಕರ ಸಂಘದ ಅಧ್ಯಕ್ಷರಾಗಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ನಿತ್ಯದ ಪೂಜೆ ಆರಂಭ:ಕಳೆದ ಕೆಲವು ದಿನಗಳಿಂದ ಭಾಗಮಂಡದ ಭಗಂಡೇಶ್ವರ ದೇವಸ್ಥಾನದಲ್ಲಿ ಸ್ಥಗಿತಗೊಂಡಿದ್ದ ನಿತ್ಯದ ಪೂಜೆ ಮತ್ತೆ ಆರಂಭವಾಗಿದೆ. ಕಾರ್ಯಾಚರಣೆ ಮುಕ್ತಾಯವಾದ ಮೇಲೆ ತಲಕಾವೇರಿಯಲ್ಲೂ ಪೂಜಾ ವಿಧಿವಿಧಾನಗಳು ಆರಂಭವಾಗುವ ಸಾಧ್ಯತೆಯಿದೆ.
ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದ ಸಚಿವ ವಿ.ಸೋಮಣ್ಣ: ‘ಕಾರ್ಯಾಚರಣೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ; ಉಳಿದ ಮೂವರ ಸುಳಿವು ಸಿಗುವ ತನಕವೂ ಶೋಧ ಮುಂದುವರಿಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಲ್ಲಿ ಹೇಳಿದರು.
‘ಸಭೆಯಲ್ಲಿ ಭಾಗಿಯಾಗಲು ಬೆಂಗಳೂರಿಗೆ ತೆರಳುತ್ತಿದ್ದು ಶುಕ್ರವಾರ ಮತ್ತೆ ವಾಪಸ್ ಬರುತ್ತೇನೆ’ ಎಂದು ಮಾಹಿತಿ ನೀಡಿದರು.
ಕಳೆದ ಆರು ದಿನಗಳಿಂದಲೂ ಸೋಮಣ್ಣ ಜಿಲ್ಲೆಯೇ ಮೊಕ್ಕಾಂ ಹೂಡಿದ್ದರು. ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದರು.
ಕಾರ್ಯಾಚರಣೆ ನಿಲ್ಲದು: ಸಚಿವ ಸೋಮಣ್ಣ
‘ಕಾರ್ಯಾಚರಣೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ; ಉಳಿದ ಮೂವರ ಸುಳಿವು ಸಿಗುವ ತನಕವೂ ಶೋಧ ಮುಂದುವರಿಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಲ್ಲಿ ಹೇಳಿದರು.
ಸಭೆಯಲ್ಲಿ ಭಾಗಿಯಾಗಲು ತಾವು ಬೆಂಗಳೂರಿಗೆ ತೆರಳುತ್ತಿದ್ದು, ಶುಕ್ರವಾರ ಮತ್ತೆ ವಾಪಸ್ ಬರುವುದಾಗಿ ಅವರು ಮಾಹಿತಿ ನೀಡಿದರು. 6 ದಿನಗಳಿಂದ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿದ್ದ ಅವರು, ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.