ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಟಿ.ಬಿ ಜಯಚಂದ್ರ ಅವರನ್ನು ಮತ್ತೆ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ತುಮಕೂರು ಜಿಲ್ಲೆಯ ನಾಯಕರ ಜೊತೆ ಸಭೆಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ವಿಷಯ ತಿಳಿಸಿದರು.
‘ಶಾಸಕ ಜಿ. ಪರಮೇಶ್ವರ ನೇತೃತ್ವದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಉಪ ಚುನಾವಣೆಯನ್ನು ಎದುರಿಸುತ್ತೇವೆ. ಪರಮೇಶ್ವರ್ ಅವರಿಗೆ ಕೆ.ಎನ್. ರಾಜಣ್ಣ ಸಾಥ್ ನೀಡಲಿದ್ದಾರೆ’ ಎಂದೂ ಅವರು ಹೇಳಿದರು.
‘ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಟಿ.ಬಿ. ಜಯಚಂದ್ರ ಅವರೇ ಮತ್ತೆ ಕಣಕ್ಕಿಳಿಯಲಿದ್ದಾರೆ. ಅಭ್ಯರ್ಥಿ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಕೆ.ಎನ್. ರಾಜಣ್ಣನವರೇ ಜಯಚಂದ್ರ ಅವರ ಹೆಸರನ್ನು ಸೂಚಿಸಿದ್ದಾರೆ. ಜಯಚಂದ್ರ ಅವರ ಅಭಿಪ್ರಾಯವನ್ನೂ ಪಡೆದಿದ್ದೇವೆ. ಪಕ್ಷದ ವರಿಷ್ಠರಿಗೆ ಅವರನ್ನು ಹೆಸರನ್ನು ಮಾತ್ರ ಕಳುಹಿಸಿಕೊಡುತ್ತೇವೆ’ ಎಂದರು.
‘ಇಂದಿನಿಂದಲೇ ಚುನಾವಣೆ ಕಾರ್ಯ ಆರಂಭಿಸುತ್ತೇವೆ. ನಾವೆಲ್ಲರೂ ಸಾಥ್ ನೀಡುತ್ತೇವೆ. ಕ್ಷೇತ್ರ ಮತ್ತೆ ಗೆದ್ದು ಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದೂ ಹೇಳಿದರು.
ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ಜಿ. ಪರಮೇಶ್ವರ, ಟಿ.ಬಿ. ಜಯಚಂದ್ರ, ಮುದ್ದಹನುಮೇಗೌಡ, ಬಿ.ಎನ್. ಚಂದ್ರಪ್ಪ, ಕೆ.ಎನ್. ರಾಜಣ್ಣ, ರಫೀಕ್ ಅಹಮದ್, ಕೆ. ಷಡಾಕ್ಷರಿ ಮತ್ತಿತರರು ಇದ್ದರು.