ಬೆಂಗಳೂರು: ‘ಪ್ರತಿಭಟನಾ ನಿರತ ರೈತರನ್ನು ಕಾಂಗ್ರೆಸ್ ಪಕ್ಷವು ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿದೆ. ಇದು ಕಾನೂನು ಬಾಹಿರವಲ್ಲವೇ’ ಎಂದು ಬಿಜೆಪಿ ಪ್ರಶ್ನಿಸಿದೆ.
ಪ್ರಿಯಾಂಕಾ ಗಾಂಧಿಯವರ ಬಂಧನ ಕುರಿತಾದ ಕಾಂಗ್ರೆಸ್ ಹೇಳಿಕೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಕೃಷಿ ಕಾನೂನುಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಾಡಿರುವ ಅವಲೋಕನಗಳ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ. ವಿಚಾರಣೆ ನಡೆಯುತ್ತಿರುವಾಗ ಹೋರಾಟ ನಡೆಸುತ್ತಿರುವುದೇಕೆ ಎಂದು ರೈತ ಸಂಘಟನೆಗಳಿಗೆ ನೋಟಿಸ್ ನೀಡಲಾಗಿದೆ. ಇಷ್ಟರ ಮೇಲೂ ರೈತರನ್ನು ಸರ್ಕಾರದ ವಿರುದ್ಧ ಕಾಂಗ್ರೆಸ್ ಎತ್ತಿ ಕಟ್ಟುತ್ತಿದೆ, ಇದು ಕಾನೂನು ಬಾಹಿರವಲ್ಲವೇ?’ ಎಂದು ಪ್ರಶ್ನಿಸಿದೆ.
‘ಮೃತ ರೈತರಿಗೆ ಸಾಂತ್ವನ ಹೇಳಲು ತೆರಳಿದ ಪ್ರಿಯಾಂಕಾ ಗಾಂಧಿ ಅವರನ್ನು ಸಿಆರ್ಪಿಸಿ 151 ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗಿದೆ. ನ್ಯೂ ಇಂಡಿಯಾದಲ್ಲಿ ಸಾಂತ್ವನ ಹೇಳುವುದನ್ನು ಶಾಂತಿಭಂಗ ಎಂದು ತಿಳಿಯಲಾಗಿದೆಯೇ?, ಶಾಂತಿಭಂಗಕ್ಕೆ ಪ್ರಚೋದಿಸಿದ ಹರಿಯಾಣ ಸಿ.ಎಂ, ಕೇಂದ್ರ ಮಂತ್ರಿ ಅಜಯ್ ಮಿಶ್ರಾ, ಹಾಗೂ ಪುತ್ರನನ್ನು ಬಂಧಿಸದಿರುವುದೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
‘ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಿಂದ ಹಿಡಿದು ಎಲ್ಲಾ ಕಾನೂನು ತಜ್ಞರು ಪ್ರಿಯಾಂಕಾ ಗಾಂಧಿ ಅವರ ಬಂಧನ ಕಾನೂನುಬಾಹಿರ ಎಂದಿದ್ದಾರೆ. ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು, ಸಂಸ್ಕೃತಿ, ಯಾವುದರಲ್ಲೂ ಗೌರವವಿರದ ಬಿಜೆಪಿ ಸರ್ಕಾರ ತಾಲಿಬಾನಿಗಳಂತೆಯೇ ತಮ್ಮದೇ ಪ್ರತ್ಯೇಕ ಕಾನೂನುಗಳನ್ನು ಸೃಷ್ಟಿಸಿದೆಯೇ?’ ಎಂದು ಕಾಂಗ್ರೆಸ್ ಟೀಕಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.