ಲಕ್ಯಾ (ಚಿಕ್ಕಮಗಳೂರು): ‘ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. ಕರ್ನಾಟಕ ಸರ್ಕಾರವು ವರದಿಯಿಂದ ಹಿಂದೆ ಸರಿಯಲ್ಲ, ರಾಜೀ ಮಾಡಿಕೊಳ್ಳಲ್ಲ ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಇಲ್ಲಿ ಗುರುವಾರ ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳುವುದೇನನ್ನು ಗಣನೆಗೆ ತೆಗೆದುಕೊಳ್ಳಲ್ಲ. ಪ್ರಕರಣಕ್ಕೆ ಸಂಬಂಧಸಿದಂತೆ ಹೋರಾಟ ಮಾಡುತ್ತೇವೆ’ ಎಂದರು.
‘ಭಾಷಾವಾರು ರಾಜ್ಯಗಳನ್ನು ವಿಂಗಡಿಸುವಂತೆ ಈಗ ಯಾವ ಕಾನೂನು ಹೇಳಿಲ್ಲ. ಮಹಾಜನ್ ವರದಿಯನ್ನು ಎಲ್ಲರೂ ಒಪ್ಪಿದ್ದೇವೆ, ಅದರಂತೆ ನಡೆದುಕೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.