ಸುಳ್ಯ: ರಾಜ್ಯ ಸಂಪುಟ ವಿಸ್ತರಣೆ ಆಗುವ ಸುದ್ದಿ ತಿಳಿದು, ತಾಲ್ಲೂಕಿನ ಮಹಿಳೆಯೊಬ್ಬರು ಸುಳ್ಯದ ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
ಕೊಡಿಯಾಲ ನಿವಾಸಿ ಕುಂಟುಪುಣಿ ಹಾಲು ಉತ್ಪಾದಕ ಸೊಸೈಟಿ ನಿರ್ದೇಶಕಿ ನೀರಜಾಕ್ಷಿ ಅವರು ಪ್ರಧಾನಿ ನರೇದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಅಂಗಾರ ಅವರು ಶಾಸಕರಾದ ಬಳಿಕ ಮೂಲ ಸೌಕರ್ಯಗಳು ಗ್ರಾಮಾಂತರ ಪ್ರದೇಶಕ್ಕೂ ತಲುಪುವಂತಾಗಿವೆ. ಅವರಿಗೆ ಸಚಿವ ಪದವಿ ನೀಡುವಂತೆ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಪ್ರಧಾನಿಗೆ ಬರೆದ ಪತ್ರದ ಪ್ರತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಿಎಂ ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೂ ರವಾನೆ ಮಾಡಿದ್ದರು.
‘ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಅಂಗಾರ ಅವರು ಮಂತ್ರಿಯಾಗುತ್ತಾರೆ ಎಂಬ ಸುದ್ದಿಗಳು ಹಬ್ಬಿಕೊಳ್ಳುತ್ತಿದ್ದವು. ಆದರೆ ಅವರಿಗೆ ಮಂತ್ರಿ ಪದವಿ ಮರೀಚಿಕೆಯಾಗಿಯೇ ಉಳಿದು ಹೋಗಿತ್ತು. ಈ ಕಾರಣಕ್ಕೆ ಈ ಬಾರಿ ಅಂಗಾರ ಅವರಿಗೆ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೆ’ ಎಂದು ನೀರಜಾಕ್ಷಿ ಹೇಳುತ್ತಾರೆ.