ಫೆ. 9 ಮತ್ತು 10ರಂದು ‘ಹಳ್ಳಿಹಬ್ಬ–2019’ ಎನ್ನುವ ವಿಶೇಷ ಕಾರ್ಯಕ್ರಮವನ್ನುಚಿಕ್ಕಣ್ಣ ಮತ್ತು ರಾಮಕ್ಕ ಸೇವಾ ಸಂಸ್ಥೆ ಆಯೋಜಿಸಿದೆ. ನಗರದ ಮಕ್ಕಳಿಗೆ ಹಳ್ಳಿಯ ವಾತಾವರಣ ಪರಿಚಯಿಸುವ ಪ್ರಯತ್ನವಿದು.
‘ಹಳ್ಳಿಯ ಜೀವನಶೈಲಿ, ಅಲ್ಲಿನ ವಾತಾವರಣ, ಗ್ರಾಮೀಣ ಆಟಗಳು, ಊಟೋಪಾಚಾರದ ಬಗ್ಗೆ ನಗರವಾಸಿಗಳಿಗೆ ಹೊಸದಾಗಿ ಪರಿಚಯಿಸುವ, ಮರು ಪರಿಚಯಿಸುವ ಪ್ರಯತ್ನ ಇಲ್ಲಿ ನಡೆಯಲಿದೆ. ಮಣ್ಣಿನ ಮಡಕೆ ಹೇಗೆ ಮಾಡುತ್ತಾರೆ! ಎನ್ನುವ ಮಕ್ಕಳ ಕುತೂಹಲಕ್ಕೆ ಇಲ್ಲೊಂದು ಸಣ್ಣ ಪರಿಹಾರವಿರಲಿದೆ. ರಾಗಿ ಮತ್ತು ಸಾಸಿವೆ ನಡುವಿನ ವ್ಯತ್ಯಾಸ ಗೊತ್ತಿಲ್ಲದ ಮುಗ್ಧ ಮಕ್ಕಳಿಗೆ ಗ್ರಾಮೀಣ ಆಹಾರದ ಸೂಕ್ಷ್ಮ ಮತ್ತು ಮಹತ್ವವನ್ನು ತಿಳಿಸುವ ಉದ್ದೇಶ ಈ ಹಬ್ಬದ್ದು. ಸಿನಿಮಾ ಗೀತೆಗಳು ಗೊತ್ತಿರುವಷ್ಟು ಜಾನಪದ ಗೀತೆಗಳ ಅರಿವು ಇಂದಿನ ಪೀಳಿಗೆಗೆ ಇಲ್ಲ. ಹಳ್ಳಿಯ ಇಂಥ ಸಂಸ್ಕೃತಿಯನ್ನೂ ಪರಿಚಯಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎನ್ನುತ್ತಾರೆ ‘ಹಳ್ಳಿಹಬ್ಬ–2019’ ಆಯೋಜಕರಾದ ನಾರಾಯಣಪ್ಪ.
ಫೆ. 9ರಂದು ಬೆಳಿಗ್ಗೆ 9ರಿಂದ 10ರವರೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ. ಬೆಳಿಗ್ಗೆ 11.30ರಿಂದ ಡೊಳ್ಳು ಕುಣಿತ, ಹಳ್ಳಿ ಆಟಗಳು, ಚಿನ್ನಿದಾಂಡು, ಬುಗುರಿ, ಲಗೋರಿ, ಚೌಕಾಬಾರ, ಗೋಲಿ ಹಾಗೂ ಇತರ ಹಳ್ಳಿಯಾಟಗಳು, ಹೋರಿ, ಹಸು, ಕರು, ಕೋಳಿಗಳ ವಿಶೇಷ ತಳಿಗಳ ಪ್ರದರ್ಶನ ಆಯೋಜಿಸಲಾಗಿದೆ.
ಮಧ್ಯಾಹ್ನ 1ರಿಂದ 3ರವರೆಗೆ ಗ್ರಾಮೀಣ ಶೈಲಿಯ ನಾಟಿ ಊಟ. ಮೆನ್ಯು: ಮುದ್ದೆ, ಹಿತುಕಿದ ಅವರೆಬೇಳೆ ಸಾರು, ವಡೆ, ಪಾಯಸ, ರಾಗಿರೊಟ್ಟಿ, ಹುಚ್ಚೆಳ್ಳು ಚಟ್ನಿ, ಅಕ್ಕಿ ರೊಟ್ಟಿ ಹಾಗೂ ಉತ್ತರ ಕರ್ನಾಟಕದ ಊಟ, ತಿಂಡಿ–ತಿನಿಸುಗಳು. ಸಂಜೆ 5ಕ್ಕೆ ವಿದ್ಯಾರ್ಥಿಗಳಿಂದ ಜನಪದ ಗೀತೆಗಳ ಸ್ಪರ್ಧೆಗಳಿವೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ.
ಫೆ. 10ರಂದು ಬೆಳಿಗ್ಗೆ 11ಕ್ಕೆ ವಿದ್ಯಾರ್ಥಿಗಳಿಗೆ ಕಡಲೆಕಾಯಿ ತಿನ್ನುವ ಸ್ಪರ್ಧೆ, ಮಹಿಳೆಯರಿಗೆ ಹಗ್ಗ ಎಳೆಯುವ ಸ್ಪರ್ಧೆ, ದೇವನಹಳ್ಳಿಯ ರಾಜಶೇಖರ್ ಅವರ ತಂಡದಿಂದ ಡೊಳ್ಳುಕುಣಿತ ಮತ್ತು ಕೀಲುಕುದುರೆ ಕುಣಿತ ಪ್ರದರ್ಶನ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಕೌದೇನಹಳ್ಳಿಯ ಜೈಹನುಮಾನ್ ಚಿಕ್ಕರಾಮಣ್ಣ ಗರಡಿಮನೆ, ಬೀರಪ್ಪ ಮತ್ತು ರೇವಣ್ಣ ಅವರ ಶಿಷ್ಯಂದಿರಿಂದ ಕುಸ್ತಿ ಪ್ರದರ್ಶನ, ದೈಹಿಕ ಶಿಕ್ಷಕ ರವಿಕುಮಾರ್ ತಂಡದಿಂದ ಹಳ್ಳಿ ಕ್ರೀಡೆಗಳು ನಡೆಯಲಿವೆ. ಮಧ್ಯಾಹ್ನ 1ಕ್ಕೆ ನಾಟಿ ಕೋಳಿಸಾರು ಮತ್ತು ರಾಗಿಮುದ್ದೆ ಊಟವಿದೆ (ಶುಲ್ಕ ಪಾವತಿಸಿದವರಿಗೆ). ಸಂಜೆ 5ಕ್ಕೆ ರವಿ ದೊಡ್ಡಮಲೆ ತಂಡದವರು ಜನಪದ ಗೀತೆಗಳನ್ನು ಹಾಡುವರು. ನಾಟಿ ಹಸುವಿನಿಂದ ತಯಾರಿಸಿದ ವಿವಿಧ ಉತ್ಪನಗಳು ಹಾಗೂ ಸಿರಿಧಾನ್ಯಗಳ ಮಾರಾಟದ ವ್ಯವಸ್ಥೆಯೂ ಇದೆ. ಪರಿಸರ ಜಾಗೃತಿಯ ಅಂಗವಾಗಿ ಸಾರ್ವಜನಿಕರು ಮತ್ತು ಮಕ್ಕಳಿಗೆ ಯುನೈಟೆಡ್ ವೇ ಅಭಿವೃದ್ಧಿ ಪಡಿಸಿರುವ ಕೌದೇನಹಳ್ಳಿ ಕೆರೆ ವೀಕ್ಷಣೆ ಕಾರ್ಯಕ್ರಮ ಕೂಡ ಆಯೋಜಿಸಲಾಗುತ್ತಿದೆ.
‘ಹಳ್ಳಿ ಹಬ್ಬ –2019’: ಉದ್ಘಾಟನೆ–ಶಾಸಕ ಬಿ.ಎ. ಬಸವರಾಜ. ಅತಿಥಿಗಳು–ಕೆ.ಅಳಗೇಸನ್, ಶಾಂತಾ ಕೃಷ್ಣಮೂರ್ತಿ, ಕೊತ್ತೂರು ಜಿ. ಮಂಜುನಾಥ್, ರಾಜೇಶ್ ಕೃಷ್ಣನ್, ಡಾ.ಎಚ್.ಎಂ. ಮಹಾದೇವಪ್ಪ, ಡಾ.ಎಲ್. ಮುನಿಸ್ವಾಮಣ್ಣ, ಶಿವಕುಮಾರ್, ಎಂ. ಮುನಿರಾಜು, ಸಾಕಮ್ಮ ರಾಮಯ್ಯ, ಕೆ.ಸಿ. ಬೀರಪ್ಪ, ಲೋಕೇಶ್, ಮುನಿಯಪ್ಪ, ಯಲ್ಲಪ್ಪ, ಕೆ.ಆರ್. ವೆಂಕಟಮುನಿಯಪ್ಪ, ಎಂ.ಭಕ್ತಣ್ಣ, ಸೈಯದ್ ಸುಲ್ತಾನ್, ಮುನಿಸ್ವಾಮಿ, ಹಿಟ್ಟಾಚ್ಚಿ ಮಂಜುನಾಥ್, ಡಾ.ಚಂದ್ರೇಖರ್. ಆಯೋಜನೆ–ಚಿಕ್ಕಣ್ಣ ಮತ್ತು ರಾಮಕ್ಕ ಸೇವಾ ಸಂಸ್ಥೆ. ಸ್ಥಳ–ಐಟಿಐ ಹಾಕಿ ಕ್ರೀಡಾಂಗಣ, ಶಕ್ತಿ ಬೇಕರಿ ಮುಂಭಾಗ. ಶನಿವಾರ ಬೆಳಿಗ್ಗೆ 11ರಿಂದ ರಾತ್ರಿ 8.30
***
ಹಳ್ಳಿಯ ಜೀವನಶೈಲಿ, ಅಲ್ಲಿನ ವಾತಾವರಣ, ಗ್ರಾಮೀಣ ಆಟಗಳು, ಊಟೋಪಾಚಾರದ ಬಗ್ಗೆ ನಗರವಾಸಿಗಳಿಗೆ ಹೊಸದಾಗಿ ಪರಿಚಯಿಸುವ, ಮರು ಪರಿಚಯಿಸುವ ಪ್ರಯತ್ನ ಇಲ್ಲಿ ನಡೆಯಲಿದೆ. ಮಣ್ಣಿನ ಮಡಕೆ ಹೇಗೆ ಮಾಡುತ್ತಾರೆ! ಎನ್ನುವ ಮಕ್ಕಳ ಕುತೂಹಲಕ್ಕೆ ಇಲ್ಲೊಂದು ಸಣ್ಣ ಪರಿಹಾರವಿರಲಿದೆ.
ಸಿ.ನಾರಾಯಣಪ್ಪ,‘ಹಳ್ಳಿಹಬ್ಬ–2019’ ಆಯೋಜಕ
***
ಪ್ರವೇಶ ಉಚಿತ.
ಮಾಹಿತಿಗೆ: 77951 46616, 99002 60125
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.