ಹುಲಿಯೂರುದುರ್ಗ: ‘ರಾಜ್ಯದ ರೇಷ್ಮೆ ಬೆಳೆಗಾರರು ಇಲಾಖೆಯಿಂದ ದೊರೆಯುತ್ತಿರುವ ಸೌಲಭ್ಯಗಳನ್ನು ಬಳಸಿಕೊಳ್ಳುವುದರ ಜತೆಗೆ ಆಧುನಿಕ ವ್ಯವಸಾಯ ಕ್ರಮಗಳನ್ನು ಅನುಸರಿಸಿ ದೇಶದ ರೇಷ್ಮೆ ಉತ್ಪಾದನೆಗೆ ಸ್ವಾವಲಂಬನೆಯ ಹರಿಕಾರರಾಗ ಬೇಕಿದೆ’ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.
ಪಟ್ಟಣದ ಹುಲಿಯೂರಮ್ಮ ಸಮುದಾಯ ಭವನದಲ್ಲಿ ನಡೆದ ರೇಷ್ಮೆ ಗೂಡು ಬೆಳೆಗಾರರ ತರಬೇತಿ ಕಾರ್ಯಾಗಾರ ಹಾಗೂ ಬೀಜಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಆರ್ಥಿಕ ಬೆಳೆಯಾಗಿ ರೇಷ್ಮೆ ಕೃಷಿ ಹೆಚ್ಚು ಲಾಭದಾಯಕ ಉದ್ಯಮ. ಇದರ ವಿಸ್ತರಣೆಗೆ ರೈತರು ಮುಂದಾಗಬೇಕು. ಕಡಿಮೆ ಪ್ರಮಾಣದ ನೀರು ಬಳಕೆಗೆ ಪೂರಕವಾಗಿ ಮರಕಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯ ಬೇಕು’ ಎಂದು ಅವರು ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಡಾ.ಆರ್.ಕೆ.ಮಿಶ್ರ, ವಿಸ್ತರಣಾ ವಿಜ್ಞಾನಿ ಡಾ.ಕೆ.ವೇದವ್ಯಾಸ, ಡಾ.ಸುಧಾಕರ್ ರಾವ್, ಡಾ.ಚಂದ್ರಶೇಖರ ಹೆಗಡೆ, ತಾಲ್ಲೂಕು ಜಂಟಿ ನಿರ್ದೇಶಕ ಎಂ.ವಿ.ಚಂದ್ರು, ಸಹಾಯಕ ನಿರ್ದೇಶಕ ರಮೇಶ್ ಹಾಗೂ ವಿನಾಯಕ ಹೊಸಮನಿ ಉಪಸ್ಥಿತರಿದ್ದರು.