ಚೆನ್ನೈ: 2021ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಉಪಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಅವರು ಬುಧವಾರ ಈ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಪಳನಿಸ್ವಾಮಿ ಮತ್ತು ಪನ್ನೀರ್ಸೆಲ್ವಂ ಅವರ ನಡುವೆ ಬಿರುಸಿನ ಪೈಪೋಟಿ ನಡೆದಿತ್ತು. ಈಗ ಇಬ್ಬರ ನಡುವಣ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಾಗಿದ್ದು, ರಾಜಿ ಸೂತ್ರ ರೂಪಿಸಲಾಗಿದೆ.
ರಾಜಿ ಸೂತ್ರದ ಅನ್ವಯ ಪಕ್ಷದ ಚಟುವಟಿಕೆಗಳ ಮೇಲೆ ನಿಗಾವಹಿಸಲು 11 ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಪಳನಿಸ್ವಾಮಿ ಅವರ ಆರು ಮತ್ತು ಪನ್ನೀರ್ಸೆಲ್ವಂ ಅವರ ಐವರು ಬೆಂಬಲಿಗರಿದ್ದಾರೆ. ಪಳನಿಸ್ವಾಮಿ ಅವರ ಆರು ಬೆಂಬಲಿಗರು ಪ್ರಸ್ತುತ ಸಚಿವರಾಗಿದ್ದಾರೆ.
#WATCH Tamil Nadu: AIADMK workers celebrate outside the party office in Chennai, after party named Edappadi K. Palaniswami as its CM Candidate for state Assembly Election 2021. https://t.co/cJIBshWegCpic.twitter.com/Ux5SZWxDgd
ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಮುನ್ನ ಇಬ್ಬರು ನಾಯಕರು ಎಐಡಿಎಂಕೆ ಕಚೇರಿಯಲ್ಲಿ ಪಕ್ಷದ ನಾಯಕರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪಳನಿಸ್ವಾಮಿ ಅವರಿಗೆ ಪನ್ನೀರ್ಸೆಲ್ವಂ ಶಾಲು ಹೊದಿಸಿ ಅಭಿನಂದಿಸಿದರು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.