ಪುಣೆ ಜಿಲ್ಲೆಯ ಪುರಂದರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಣಾಯಕ ಪಾತ್ರ ವಹಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಯೋಧ್ಯೆಯಲ್ಲಿ ರಾಮ ಮಂದಿರದ ಸಮಸ್ಯೆ ಈಗ ಮುಗಿದಿದೆ. ಯಾರೂ ಅದರ ಬಗ್ಗೆ ಚರ್ಚಿಸುವುದಿಲ್ಲ’ ಎಂದು ತಿಳಿಸಿದ್ದಾರೆ.
ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ, ದೇಗುಲದಲ್ಲಿ ಸೀತಾದೇವಿಯ ವಿಗ್ರಹವಿಲ್ಲ ಎಂದು ಸಭೆಯೊಂದರಲ್ಲಿ ಕೆಲವು ಮಹಿಳೆಯರು ದೂರಿದರು ಎಂದು ಪವಾರ್ ಹೇಳಿದ್ದಾರೆ.
ಪವಾರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ, ಮಾಜಿ ಮುಖ್ಯಮಂತ್ರಿ (ಶರದ್ ಪವಾರ್) ಅವರು ರಾಮ ಮಂದಿರದ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಮಾಹಿತಿ ತಿಳಿದುಕೊಳ್ಳಬೇಕು. ಏಕೆಂದರೆ, ಅಲ್ಲಿರುವುದು ಬಾಲ ರಾಮನ ಮೂರ್ತಿ. ತಮ್ಮ ಸೊಸೆಯನ್ನು ಹೊರಗಿನವರೆನ್ನುವ ಪವಾರ್, ಸೀತಾದೇವಿಯ ಬಗ್ಗೆ ಕಾಳಜಿ ತೋರಿಸುವುದು ಬೂಟಾಟಿಕೆಯ ಪರಮಾಧಿಯೇ ಹೊರತು ಬೇರೇನೂ ಅಲ್ಲ ಎಂದು ತಿಳಿಸಿದ್ದಾರೆ.
ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಗುರಿಯಾಗಿಸಿ ಶರದ್ ಪವಾರ್ ಇತ್ತೀಚೆಗೆ ಮಾಡಿದ ಹೇಳಿಕೆಯನ್ನು ಬಿಜೆಪಿ ನಾಯಕ ಉಲ್ಲೇಖಿಸಿದ್ದಾರೆ.