ಶ್ರೀನಗರ: ದೇವಾಲಯಗಳ ಭೇಟಿಗೆ ತೆರಳುತ್ತಿದ್ದ ಭಕ್ತರನ್ನು ಹೊತ್ತ ಬಸ್ಸೊಂದು ಚೌಕಿ ಚಾರಾ ಪ್ರಾಂತ್ಯದ ತುಂಗಿ–ಮೊಹ್ರಾ ಬಳಿಯ ಕಣಿವೆಗೆ ಬಿದ್ದ ಪರಿಣಾಮ ಅದರೊಳಗಿದ್ದ 21 ಜನರು ಮೃತಪಟ್ಟಿದ್ದಾರೆ.
ಹರಿಯಾಣದ ಕುರುಕ್ಷೇತ್ರದಿಂದ ಹೊರಟ ಬಸ್ಸು ಜಮ್ಮುವಿನ ವಿವಿಧ ದೇವಾಲಯಗಳ ಭೇಟಿಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸು ಕಣಿವೆಗೆ ಕುಸಿದಿದೆ. ಇದರ ಪರಿಣಾಮ 21 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯ ಸಾಗಿದೆ. ಗಾಯಗೊಂಡಿರುವ 47 ಜನರನ್ನು ಜಮ್ಮುವಿನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಜಮ್ಮುವಿನ ಪೌಂಜ್ ಪ್ರದೇಶದಲ್ಲಿರುವ ಶಿವ ಖೋರಿ ಕಡೆ ಹೊರಟಿದ್ದ ಬಸ್ಸು 150 ಅಡಿ ಆಳದ ಕಣಿವೆಗೆ ಉರುಳಿದೆ. ಮೃತದೇಹಗಳನ್ನು ಅಖನೂರ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇದೇ ಆಸ್ಪತ್ರೆಯಲ್ಲಿ ಏಳು ಜನ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಜನರ ದೇಹ ಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
‘ಬಸ್ಸು ಸಾಗುತ್ತಿದ್ದ ಮಾರ್ಗದಲ್ಲಿ ಕಾರೊಂದು ಎದುರಿನಿಂದ ಬಂದಿತು. ತಿರುವಿನಲ್ಲಿ ಅದಕ್ಕೆ ಸ್ಥಳ ಕಲ್ಪಿಸುವ ಪ್ರಯತ್ನದಲ್ಲಿದ್ದ ಚಾಲಕನ ಲೆಕ್ಕಾಚಾರ ತಪ್ಪಿದ ಪರಿಣಾಮ ಬಸ್ಸು ಕಣಿವೆಗೆ ಬಿದ್ದಿತು’ ಎಂದು ಗಾಯಾಳು ಅಮರ್ ಚಂದ್ ಮಾಹಿತಿ ನೀಡಿದ್ದಾರೆ.