ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ–ಮೈಸೂರಿಗೆ ಮತ್ತೊಂದು ವಂದೇ ಭಾರತ್: ಎಲ್ಲೆಲ್ಲಿ ನಿಲುಗಡೆ? ವೇಳಾಪಟ್ಟಿ?

ಚೆನ್ನೈ–ಬೆಂಗಳೂರು–ಮೈಸೂರು ನಡುವೆ ಮತ್ತೊಂದು ವಂದೇ ಭಾರತ್ ರೈಲಿಗೆ ಚಾಲನೆ: ಎಲ್ಲೆಲ್ಲಿ ನಿಲುಗಡೆ? ವೇಳಾಪಟ್ಟಿ ಇಲ್ಲಿದೆ
Published 12 ಮಾರ್ಚ್ 2024, 10:48 IST
Last Updated 12 ಮಾರ್ಚ್ 2024, 10:48 IST
ಅಕ್ಷರ ಗಾತ್ರ

ಚೆನ್ನೈ: ಚೆನ್ನೈ–ಮೈಸೂರು ನಡುವೆ ಮತ್ತೊಂದು ‘ವಂದೇ ಭಾರತ್ ರೈಲಿಗೆ’ ಚಾಲನೆ ಸಿಕ್ಕಿದೆ. ನಾಡಿದ್ದು ಅಂದರೆ ಮಾರ್ಚ್ 14ರಂದು ದೈನಂದಿನ ಸಂಚಾರವನ್ನು ಆರಂಭಿಸಲಿದೆ.

ಅಹಮದಾಬಾದ್‌ನಿಂದ ವರ್ಚುವಲ್ ಕಾರ್ಯಕ್ರಮದ ಮೂಲಕ ಚೆನ್ನೈ–ಬೆಂಗಳೂರು–ಮೈಸೂರು ನಡುವಿನ ಎರಡನೇ ವಂದೇ ಭಾರತ್ ರೈಲಿಗೆ ‍ಪ್ರಧಾನಿ ಮೋದಿ ಅವರು ಇಂದು ಹಸಿರು ನಿಶಾನೆ ತೋರಿಸಿದರು.

ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಆರ್‌.ಎನ್. ರವಿ ಹಾಗೂ ಕೇಂದ್ರ ಸಚಿವ ಎಲ್. ಮುರುಗನ್ ಅವರು ಪಾಲ್ಗೊಂಡಿದ್ದರು.

ನಿಲುಗಡೆ ಹಾಗೂ ವೇಳಾಪಟ್ಟಿ

ಮಾರ್ಚ್ 14ರಿಂದ ಏಪ್ರಿಲ್ 4ರವರೆಗೆ ಈ ರೈಲು (Train No-20663/20664) ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದ (SMVT) ಮಧ್ಯ ಮಾತ್ರ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಅಂದರೆ ಮಾರ್ಚ್ 14ರಿಂದ ಏಪ್ರಿಲ್ 4ರವರೆಗೆ ಈ ಹೊಸ ವಂದೇ ಭಾರತ್ ರೈಲು ಮೈಸೂರುವರೆಗೆ ಸಂಚರಿಸುವುದಿಲ್ಲ. ಈ ವೇಳೆ ತಮಿಳುನಾಡಿನ ಕಾಟಪಡಿ-ಕೆ.ಆರ್. ಪುರ ಮಧ್ಯ ಮಾತ್ರ ನಿಲುಗಡೆ ಇದೆ.

ರೈಲು ಬುಧವಾರ ಹೊರತುಪಡಿಸಿ ಪ್ರತಿ ದಿನ ಸಂಜೆ 5 ಗಂಟೆಗೆ ಚೆನ್ನೈನಿಂದ ಹೊರಟು ಅಂದೇ ರಾತ್ರಿ 9:25ಕ್ಕೆ ಬೆಂಗಳೂರಿನ ಸರ್‌ ಎಂ.ವಿ ರೈಲು ನಿಲ್ದಾಣ ತಲುಪಲಿದೆ.

ಪುನಃ ಮಾರನೇ ದಿನ ಬೆಳಿಗ್ಗೆ 7.25ಕ್ಕೆ ಸರ್‌ ಎಂ.ವಿ ರೈಲು ನಿಲ್ದಾಣದಿಂದ ಹೊರಟು ಮಧ್ಯಾಹ್ನ 12:25ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ. ಈ ವೇಳೆ ಕೆ.ಆರ್‌. ಪುರ- ಕಾಟಪಡಿ ಮಧ್ಯ ಮಾತ್ರ ನಿಲುಗಡೆ ಇದೆ.

ಮುಂದಿನ ತಿಂಗಳಿನಿಂದ ಮೈಸೂರಿನಿಂದ ಸಂಚಾರ

ಮುಂದಿನ ತಿಂಗಳು ಏಪ್ರಿಲ್ 5ರಿಂದ ವೇಳಾಪಟ್ಟಿಯಂತೆ ಈ ಹೊಸ ವಂದೇ ಭಾರತ್ ರೈಲು ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಮೈಸೂರು ಮಧ್ಯ ಸಂಚಾರ ನಡೆಸಲಿದೆ.

ಬುಧವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮೈಸೂರಿನಿಂದ ಹೊರಡುವ ಈ ರೈಲು ಅಂದೇ ಮಧ್ಯಾಹ್ನ 12:25ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ. ಈ ವೇಳೆ ಮಂಡ್ಯ–ಕೆಎಸ್‌ಆರ್ ಬೆಂಗಳೂರು– (ಬೆಳಿಗ್ಗೆ 7.25ಕ್ಕೆ) ಸರ್. ಎಂವಿ–ಕೆಆರ್‌ ಪುರ–ಕಾಟಪಡಿ ಮಧ್ಯ ಮಾತ್ರ ನಿಲುಗಡೆ ಇದೆ.

ಅಂದೇ ಚೆನ್ನೈನಿಂದ ಸಂಜೆ 5ಕ್ಕೆ ಹೊರಡುವ ಈ ರೈಲು ರಾತ್ರಿ 11:20 ಕ್ಕೆ ಮೈಸೂರು ತಲುಪಲಿದೆ. ಈ ವೇಳೆ ತಮಿಳುನಾಡಿನ ಕಾಟಪಡಿ–ಬೆಂಗಳೂರಿನ ಕೆ.ಆರ್. ಪುರ–ಕೆಎಸ್‌ಆರ್ ಬೆಂಗಳೂರು (ರಾತ್ರಿ 9.25ಕ್ಕೆ)–ಮಂಡ್ಯದಲ್ಲಿ ನಿಲುಗಡೆಯಾಗಲಿದೆ.

ಕಳೆದ ವರ್ಷ ಮೈಸೂರು–ಬೆಂಗಳೂರು–ಚೆನ್ನೈ ನಡುವೆ ಮೊದಲ ವಂದೇ ಭಾರತ್ ಸಂಚಾರ ಪ್ರಾರಂಭಿಸಿತ್ತು. ಈ ರೈಲು ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ನೈರುತ್ಯ ರೈಲ್ವೆಗೆ ಸೇರಿದೆ. ಈಗ ಸಂಚಾರ ಆರಂಭಿಸಿರುವ ಹೊಸ ಎರಡನೇ ವಂದೇ ಭಾರತ್ ರೈಲು ಚೆನ್ನೈನಲ್ಲಿರುವ ದಕ್ಷಿಣ ರೈಲ್ವೆಗೆ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT