ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು, ಹೊಸ ವರ್ಷಾಚರಣೆ ನಿಮಿತ್ತ ಹಮ್ಮಿಕೊಳ್ಳುವ ಔತಣಕೂಟಗಳು ಹಾಗೂ ಜನಸಂದಣಿ ಸೇರುವುದನ್ನು ನಿರ್ಬಂಧಿಸಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿವರ್ಷಾಚರಣೆಗಾಗಿ ಜನರು ಸೇರುವಂತಿಲ್ಲ ಎಂದು ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ತಿಳಿಸಿದ್ದಾರೆ. ಡಿಸೆಂಬರ್ 25ರ ಮಧ್ಯರಾತ್ರಿಯಿಂದ ಈ ಆದೇಶ ಜಾರಿಗೆ ಬಂದಿದೆ.
ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಖಾಸಗಿ ಒಡೆತನದ ಮೈದಾನಗಳಲ್ಲಿ ನಡೆಯುವ ಸಂಭ್ರಮಾಚರಣೆಗಳಿಗೆ ನಿರ್ಬಂಧ ಅನ್ವಯವಾಗಲಿದೆ.ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿತ್ತು.
*ಮುಂಬೈನಲ್ಲಿ ಶನಿವಾರ 757 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಸತತ 5ನೇ ದಿನವೂ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ.ನಗರದಲ್ಲಿ ಸೋಮವಾರ 204, ಮಂಗಳವಾರ 327, ಬುಧವಾರ 490, ಗುರುವಾರ 602, ಶುಕ್ರವಾರ 683 ಹೊಸ ಪ್ರಕರಣಗಳು ಕಂಡುಬಂದಿದ್ದವು.
*ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ 249 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ದೃಢಪಡುವ ಪ್ರಮಾಣವು ಶೇ 0.43ಕ್ಕೆ ಏರಿಕೆಯಾಗಿದೆ.
*ಶನಿವಾರದಿಂದ ಜನವರಿ 2ರವರೆಗೆ ಯಾವುದೇ ಸಾರ್ವಜನಿಕ ಸಮಾರಂಭ ಅಥವಾ ರ್ಯಾಲಿಗಳನ್ನು ನಿಷೇಧಿಸಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.