‘ತಾನೂ ಸಹ ಇಪ್ಪತ್ತು ವರ್ಷಗಳಿಂದ ಇಂತಹ ಅವಮಾನಗಳನ್ನು ಎದುರಿಸುತ್ತಿದ್ದೇನೆ. ಆದರೆ, ಭಾರತದ ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಕಚೇರಿಗೆ ಅದರಲ್ಲೂ ಸಂಸತ್ತಿನ ಆವರಣದಲ್ಲಿ ಅವಮಾನ ಆಗಿರುವುದು ಅತ್ಯಂತ ದುರದೃಷ್ಟಕರ’ ಎಂದು ಪ್ರಧಾನಿ ಹೇಳಿರುವುದಾಗಿ ಧನಕರ್ ಪೋಸ್ಟ್ ಮಾಡಿದ್ದಾರೆ.
‘ನನ್ನನ್ನು ನನ್ನ ಕರ್ತವ್ಯ ಪಾಲನೆ ಮತ್ತು ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯುವ ನನ್ನ ಬದ್ಧತೆಯನ್ನು ಈ ರೀತಿಯ ವರ್ತನೆಗಳಿಂದ ತಡೆಯಲಾಗುವುದಿಲ್ಲ. ನಾನು ನನ್ನ ಹೃದಯದಾಳದಿಂದ ಆ ಮೌಲ್ಯಗಳಿಗೆ ಬದ್ಧನಾಗಿದ್ದೇನೆ. ಯಾವುದೇ ಅವಮಾನಗಳು ನನ್ನ ಹಾದಿಯನ್ನು ಬದಲಾಯಿಸುವುದಿಲ್ಲ ಎಂದು ಮೋದಿಗೆ ತಿಳಿಸಿದೆ’ ಎಂದು ಧನಕರ್ ಹೇಳಿದ್ದಾರೆ.
ಸಂಸದರ ಅಮಾನತು ಖಂಡಿಸಿ ವಿಪಕ್ಷಗಳು ಮಂಗಳವಾರ ನಡೆಸುತ್ತಿದ್ದ ಪ್ರತಿಭಟನೆ ವೇಳೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಸದನದ ಕಾರ್ಯವೈಖರಿಯನ್ನು ಅಣಕಿಸಿದ್ದರು. ಈ ವಿಡಿಯೊ ಎಲ್ಲೆಡೆ ಹರದಾಡಿ ಆಕ್ರೋಶ ವ್ಯಕ್ತವಾಗಿತ್ತು.