ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ಸೂರ್ಯನ ಅಧ್ಯಯನಕ್ಕೆ ಕೈಗೊಂಡಿರುವ ಆದಿತ್ಯ–ಎಲ್1 ಯೋಜನೆಯ ಯಶಸ್ಸಿಗಾಗಿ ದೇಶದೆಲ್ಲೆಡೆ ಪೂಜೆ, ಹವನಗಳು ಶನಿವಾರ ಆಯೋಜನೆಗೊಂಡಿವೆ.
ಬೆಳಿಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡ್ಡಯನಗೊಳ್ಳಲಿರುವ ಪಿಎಸ್ಎಲ್ವಿ–ಸಿ57 ರಾಕೇಟ್ ಆದಿತ್ಯ–ಎಲ್1 ಅನ್ನು ಲಗ್ರಾಂಜಿಯನ್ ಬಿಂದುವಿಗೆ ಸೇರಿಸಲಿದೆ. ಸುಮಾರು ₹400 ಕೋಟಿ ವೆಚ್ಚದ ಈ ಯೋಜನೆ ಚಂದ್ರಯಾನ–3ರ ನಂತರದ ಅತಿ ದೊಡ್ಡ ಯೋಜನೆಯಾಗಿದೆ.
ಆ. 23ರಂದು ಚಂದ್ರಯಾನ–3ರ ಯಶಸ್ವಿಗೊಂಡ ಬೆನ್ನಲ್ಲೇ ನಡೆಯುತ್ತಿರುವ ಆದಿತ್ಯ–ಎಲ್1 ಯೋಜನೆಗೆ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಯೋಜನೆಯ ಯಶಸ್ಸಿಗೆ ಹಲವರು ಸೂರ್ಯನ ಆರಾಧನೆ, ಹೋಮ, ಹವನಗಳನ್ನು ನಡೆಸುತ್ತಿದ್ದಾರೆ. ಹಲವರು ಪಾರಾಯಣಗಳನ್ನು ನಡೆಸಿದ ಕುರಿತು ವರದಿಯಾಗಿವೆ.
ಇಸ್ರೊ ವಿಜ್ಞಾನಿಗಳು ಆದಿತ್ಯ–ಎಲ್1 ನೌಕೆಯ ಪ್ರತಿಕೃತಿಯೊಂದಿಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ವೆಂಕಟೇಶ್ವರನ ದರ್ಶನವನ್ನು ಪಡೆದರು. ಮತ್ತೊಂದೆಡೆ ಆದಿತ್ಯ–ಎಲ್1 ಯಶಸ್ಸಿಗಾಗಿ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಅವರು ಆಂಧ್ರಪ್ರದೇಶದ ಸೂಳ್ಳೂರುಪೇಟದಲ್ಲಿರುವ ಚಂಗಾಲಮ್ಮ ಪರಮೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನೂ ಹಲವೆಡೆ ಯೋಗದ ಮೂಲಕವೂ ಯೋಜನೆ ಯಶಸ್ಸಿಗೆ ಶುಭಕೋರಲಾಯಿತು. ಕೆಲ ಯೋಗ ಕೇಂದ್ರಗಳು ಆದಿತ್ಯ–ಎಲ್1 ಯೋಜನೆ ಯಶಸ್ಸಿಗಾಗಿ ಸೂರ್ಯ ನಮಸ್ಕಾರವನ್ನು ಆಯೋಜಿಸಿದ್ದವು.
ಉತ್ತರ ಪ್ರದೇಶದ ಲಖನೌನಲ್ಲಿರುವ ಮಂಕಾಮಹೇಶ್ವರ ದೇವಸ್ಥಾನದಲ್ಲಿ ಮಹಾಂತ ದಿವ್ಯಗಿರಿ ಅವರು ಆದಿತ್ಯ–ಎಲ್1 ಯೋಜನೆ ಯಶಸ್ಸಿಗಾಗಿ ಹವನ ನಡೆಸಿದರು.
ಪಿಟಿಐ ಚಿತ್ರ
ಶ್ರೀಹರಿಕೋಟಾ: ಸೂರ್ಯನ ಅಧ್ಯಯನಕ್ಕಾಗಿ ಲಗ್ರಾಂಜಿಯನ್ ಬಿಂದುವಿಗೆ ಆದಿತ್ಯ–ಎಲ್1 ನೌಕೆ ಹೊತ್ತು ಸಾಗಲಿರುವ ಪಿಎಸ್ಎಲ್ವಿ–ಸಿ57 ರಾಕೇಟ್ ಉಡ್ಡಯನ ವೀಕ್ಷಣೆಗೆ ವಿದ್ಯಾರ್ಥಿಗಳು, ಹಿರಿಯರು ಹಾಗೂ ಕಿರಿಯರು ಸಾಲುಗಟ್ಟಿ ಹೆಜ್ಜೆ ಶ್ರೀಹರಿಕೋಟಾದ ಸತೀಶ್ ಧವನ್ ರಾಕೇಟ್ ಉಡ್ಡಯನ ಕೇಂದ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಪಂಜಾಬ್ನ ಸರ್ಕಾರಿ ಶಾಲೆಯ 23 ವಿದ್ಯಾರ್ಥಿಗಳು ಈ ದೃಶ್ಯವನ್ನು ನೇರವಾಗಿ ವೀಕ್ಷಿಸುವ ಅವಕಾಶ ಪಡೆದಿದ್ದಾರೆ. ಅದರ ಕುರಿತು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಈ ವಿದ್ಯಾರ್ಥಿಗಳು ವಿಮಾನ ಮೂಲಕ ಆಂಧ್ರಪ್ರದೇಶಕ್ಕೆ ಬಂದಿಳಿದು, ಶನಿವಾರ ಶ್ರೀಹರಿಕೋಟಾ ತಲುಪಿದರು. ಇವರಂತೆಯೇ ರಾಜ್ಯದ ವಿವಿಧ ರಾಜ್ಯಗಳ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಈ ಐತಿಹಾಸಿ ಘಟನೆಗೆ ಸಾಕ್ಷಿಯಾಗಲು ರಾಕೇಟ್ ಉಡ್ಡಯನ ಕೇಂದ್ರಕ್ಕೆ ಬಂದಿಳಿದಿದ್ದಾರೆ. ಯುವಕ ಹಾಗೂ ಯುವತಿಯರು ಮತ್ತು ಹಿರಿಯರೂ ಆದಿತ್ಯ–ಎಲ್1 ಯೊಜನೆಯ ಆರಂಭಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಬಂದಿದ್ದಾರೆ.
ಏರು ಬಿಸಿಲಿನ ಝಳವನ್ನೂ ಲೆಕ್ಕಿಸದೆ ಛತ್ರಿ ಹಿಡಿದು, ಕೆಲವರು ತಲೆಗೆ ಟೋಪಿ ಧರಿಸಿ ವೀಕ್ಷಣಾ ಸ್ಥಳದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಇಸ್ರೊ ಕೈಗೊಂಡಿರುವ ಆದಿತ್ಯ–ಎಲ್1 ಯೋಜನೆಯು ಸೂರ್ಯನ ಅಧ್ಯಯನದಲ್ಲಿ ಅತ್ಯಂತ ಮಹತ್ವದ್ದು ಎಂದು ಇಸ್ರೊ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭೂಮಿ ಮತ್ತು ಸೂರ್ಯನ ಪರಸ್ಪರ ಗುರುತ್ವಾಕರ್ಷಣ ಶಕ್ತಿಗಳು ವಾಸ್ತವಭಾಸದಲ್ಲಿ ಶೂನ್ಯವಾಗುವ ಲಗ್ರಾಂಜಿಯನ್ ಬಿಂದುವಿನಲ್ಲಿ ನೌಕೆಯನ್ನು ಸೇರಿಸುವುದು ಸಾಹಸದ ಕೆಲಸ. ಇಲ್ಲಿ ಇಂಧನ ಬೇಡಿಕೆಯೂ ಕಡಿಮೆ. ಹೀಗಾಗಿ ನೌಕೆಯನ್ನು ನಿರ್ವಹಿಸುವುದು ಸುಲಭ. ನೌಕೆಯಿಂದ ಲಭಿಸುವ ಮಾಹಿತಿಯು ಪ್ರಕೃತಿ ವಿಕೋಪ, ವಾತಾವರಣ, ಬರಗಾಲ, ಪ್ರಳಯ ಸ್ವರೂಪಿ ಮಳೆ, ಪ್ರವಾಹ ಕುರಿತ ಅಧ್ಯಯನಕ್ಕೆ ನೆರವಾಗಲಿದೆ ಎಂದರು.
ಇಸ್ರೊ ಎಕ್ಸ್ ಚಿತ್ರ