ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೈತ್ ಅಗ್ನಿ ದುರಂತ: ಭಾರತ ತಲುಪಿದ 45 ಮೃತದೇಹ

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಸನ್ನಿವೇಶ; ಮೃತರಿಗೆ ಗಣ್ಯರ ನಮನ
Published : 14 ಜೂನ್ 2024, 16:06 IST
Last Updated : 14 ಜೂನ್ 2024, 16:06 IST
ಫಾಲೋ ಮಾಡಿ
Comments

ಕುಸಿದ ಕುಟುಂಬದ ಆಧಾರ
ಹೋಷಿಯಾರ್‌ಪುರ(ಪಂಜಾಬ್): ಕುವೈತ್‌ನ ಮಂಗಾಫ್‌ನಲ್ಲಿ ನಡೆದ ಅಗ್ನಿ ಅವಘಢದಲ್ಲಿ ಮೃತರಾದ ಭಾರತೀಯರಲ್ಲಿ ಪಂಜಾಬ್‌ನ ಹೋಷಿಯಾರ್‌ಪುರದ ಹಿಮ್ಮತ್ ರಾಯ್ (62) ಒಬ್ಬರಾಗಿದ್ದಾರೆ. ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಅವರ ಸಾವಿನಿಂದ ಪತ್ನಿ ಮತ್ತು ಮಕ್ಕಳು ಕಂಗೆಟ್ಟಿದ್ದಾರೆ. ರಾಯ್ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಆಗಿದ್ದು ಮಗ 10ನೇ ತರಗತಿ ಓದುತ್ತಿದ್ದಾನೆ. 30 ವರ್ಷಗಳ ಹಿಂದೆ ಕುವೈತ್‌ಗೆ ಹೋಗಿದ್ದ ಹಿಮ್ಮತ್ ರಾಯ್ ಅಲ್ಲಿನ ತಯಾರಿಕಾ ಘಟಕವೊಂದರಲ್ಲಿ ಕೆಲಸ ಮಾಡುತ್ತಿದ್ದರು.   ಇದುವರೆಗೂ ತಮಗೆ ಎನ್‌ಬಿಟಿಸಿ ಕಂಪನಿಯಿಂದಾಗಲಿ ಅಥವಾ ಕುವೈತ್ ಸರ್ಕಾರದಿಂದಾಗಲಿ ಪರಿಹಾರದ ಭರವಸೆ ಸಿಕ್ಕಿಲ್ಲ. ಪರಿಹಾರ ಕೊಟ್ಟರೆ ತಮ್ಮ ಜೀವನಕ್ಕೆ ಅನುಕೂಲವಾಗಲಿದೆ ಎಂದು ರಾಯ್ ಕುಟುಂಬ ತಿಳಿಸಿದೆ.
ಪೊಲೀಸ್ ಬೆಂಗಾವಲಿನಲ್ಲಿ ಮೃತದೇಹ ರವಾನೆ
ತಮ್ಮ ಪ್ರೀತಿಪಾತ್ರರ ಪ್ರಾಣಕ್ಕೆ ಎರವಾದ ಅವಘಢ ಹೇಗೆ ನಡೆಯಿತು ಎನ್ನುವುದರ ಪೂರ್ಣ ಮಾಹಿತಿ ಹೆಚ್ಚಿನ ಕುಟುಂಬಗಳಿಗೆ ಇನ್ನೂ ಲಭ್ಯವಾಗಿಲ್ಲ. ಮೃತದೇಹಗಳನ್ನು ಪೊಲೀಸರ ಬೆಂಗಾವಲಿನೊಂದಿಗೆ ಮೃತರ ಊರುಗಳಿಗೆ ಆಂಬುಲೆನ್ಸ್‌ಗಳಲ್ಲಿ ಸಾಗಿಸಲು ವ್ಯವಸ್ಥೆ ಮಾಡಲಾಗಿತ್ತು. ತಮಿಳುನಾಡಿನ ಏಳು ಆಂಬುಲೆನ್ಸ್‌ಗಳು ರಾಜ್ಯದ ಗಡಿ ದಾಟುವವರೆಗೆ ಕೇರಳ ಪೊಲೀಸರು ಬೆಂಗಾವಲಾಗಿದ್ದರು.  ಅವಘಢದಲ್ಲಿ ಮೃತರಾದ ಒಬ್ಬರು ಕರ್ನಾಟಕದ ಕಲಬುರಗಿ ಮೂಲದವರಾಗಿದ್ದು ಅವರ ಮೃತದೇಹವನ್ನು  ಹೈದರಾಬಾದ್‌ಗೆ ವಿಮಾನದಲ್ಲಿ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಆಂಬುಲೆನ್ಸ್‌ನಲ್ಲಿ ಅವರ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಿಂದ ಹಿಂದಿರುಗಿದ ದಿನವೇ ಸಾವು
ಅಮರಾವತಿ (ಪಿಟಿಐ): ಕುವೈತ್‌ನಲ್ಲಿ ನಡೆದ ಅಗ್ನಿ ಅವಘಢದಲ್ಲಿ ಮೃತಪಟ್ಟವರಲ್ಲಿ ಆಂಧ್ರಪ್ರದೇಶದ ಮೂವರು ವಲಸೆ ಕಾರ್ಮಿಕರು ಸೇರಿದ್ದಾರೆ ಎಂದು ಆಂಧ್ರಪ್ರದೇಶದ ಅನಿವಾಸಿಗಳ ತೆಲುಗು ಸಂಘ (ಎಪಿಎನ್‌ಆರ್‌ಟಿಎಸ್) ಮಾಹಿತಿ ನೀಡಿದೆ. ಶ್ರೀಕಾಕುಳಂ ಜಿಲ್ಲೆಯ ಟಿ.ಲೋಕನಂದಂ ಪಶ್ಚಿಮ ಗೋದಾವರಿ ಜಿಲ್ಲೆಯ ಎಂ.ಸತ್ಯನಾರಾಯಣ ಮತ್ತು ಎಂ.ಈಶ್ವರುಡು ಮೃತಪಟ್ಟಿದ್ದಾರೆ. ಇತ್ತೀಚೆಗೆ ಚುನಾವಣೆ ಮತ್ತು ಇತರ ಕಾರ್ಯಗಳ ನಿಮಿತ್ತ ಸ್ವಗ್ರಾಮ ಸೋಮಪೇಟಕ್ಕೆ ಬಂದಿದ್ದ ಲೋಕನಂದಂ ಕೆಲ ದಿನ ಊರಿನಲ್ಲಿಯೇ ಇದ್ದರು. ನಂತರ ಜೂನ್ ಐದರಂದು ಹೈದರಾಬಾದ್‌ಗೆ ತೆರಳಿದ್ದರು. ಅಲ್ಲಿ ನಾಲ್ಕು ದಿನ ಕಳೆದು ಜೂನ್ 11ರಂದು ಕುವೈತ್‌ ತಲುಪಿದ್ದರು. ಭಾರತದಿಂದ ಕುವೈತ್‌ಗೆ ಹಿಂದಿರುಗಿದ ದಿನದಂದೇ ಅವರು ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಮನೆಗೆ ಆಧಾರವಾಗಿದ್ದ ಲೋಕನಂದಂ ಸಾವಿನಿಂದಾಗಿ ಅವರ ಕುಟುಂಬ ಶೋಕದಲ್ಲಿ ಮುಳುಗಿದೆ.
ಅನುಮತಿ ನಿರಾಕರಣೆ: ಕೇಂದ್ರದ ಕ್ರಮಕ್ಕೆ ಆಕ್ಷೇಪ
ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕುವೈತ್‌ಗೆ ತೆರಳಲು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಗೆ ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಟೀಕಿಸಿವೆ. ಆದರೆ ಕೇಂದ್ರ ಸರ್ಕಾರದ ಕ್ರಮವನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ‘ಕುವೈತ್‌ಗೆ ತೆರಳಿ ಅಲ್ಲಿ ದುರಂತದಲ್ಲಿ ಸಿಲುಕಿದ ನಮ್ಮ ಜನರಿಗೆ ನೆರವಾಗಲು ನಾವು ಕೇಂದ್ರ ಸರ್ಕಾರದಿಂದ ಅನುಮತಿ ಬಯಸಿದ್ದೆವು’ ಎಂದು ಗುರುವಾರ ರಾತ್ರಿ ವೀಣಾ ಜಾರ್ಜ್ ಹೇಳಿದ್ದರು. ಅದಕ್ಕೆ ಕೇಂದ್ರ ಅನುಮತಿ ನೀಡರಲಿಲ್ಲ. ‘ಅದು ಕೇಂದ್ರದ ತಪ್ಪು ನಿರ್ಧಾರ’ ಎಂದು ಪಿಣರಾಯಿ ಟೀಕಿಸಿದ್ದಾರೆ. ‘ಮೃತದೇಹಗಳನ್ನು ಶುಕ್ರವಾರ ಭಾರತಕ್ಕೆ ತರಲಾಗಿದೆ. ಗುರುವಾರ ಅಲ್ಲಿಗೆ ಹೋಗಿ ವೀಣಾ ಜಾರ್ಜ್ ಅವರು ಏನು ಮಾಡುತ್ತಿದ್ದರು’ ಎಂದು ಆರಿಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT