ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಘಟಬಂಧನ್ನಲ್ಲಿಯೇ ಮುಂದುವರಿಯುತ್ತಾರೋ ಅಥವಾ ಅದನ್ನು ತ್ಯಜಿಸಿ, ಬಿಜೆಪಿಯೊಂದಿಗೆ ಕೈ ಜೋಡಿಸಿ ಅಧಿಕಾರದಲ್ಲಿ ಉಳಿಯುತ್ತಾರೋ ಎಂಬ ಕುತೂಹಲ ಮುಂದುವರಿದಿದೆ.
ಇದರ ನಡುವೆಯೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಲು ನಿತೀಶ್ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ನಿತೀಶ್ ಅವರನ್ನು ಸಮಾಧಾನಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಯತ್ನಿಸಿದರು. ಸೋನಿಯಾ ಗಾಂಧಿ ಮತ್ತು ನಿತೀಶ್ ನಡುವೆ ದೂರವಾಣಿ ಮೂಲಕ ಮಾತುಕತೆ ಸಾಧ್ಯವಾಗಿಸಲು ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ನ ಪ್ರಯತ್ನಗಳು ವಿಳಂಬವಾಯಿತು ಎಂದು ಜೆಡಿಯು ಮೂಲಗಳು ಪ್ರತಿಕ್ರಿಯಿಸಿವೆ.
ಗಣರಾಜ್ಯೋತ್ಸವ ದಿನದಂದು ಬಿಹಾರದಲ್ಲಿನ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಂಡಂತೆ ಭಾಸವಾಯಿತು. ನಾನಾ ರೀತಿಯ ಊಹಾಪೋಹ, ವಂದಂತಿಗಳು ಹರಿದಾಡಿದವು. ಇನ್ನೇನು ನಿತೀಶ್ ಅವರು ಬಿಜೆಪಿಯೊಂದಿಗೆ ಕೈಜೋಡಿಸಲು ಭಾನುವಾರವೇ ದಿನ ನಿಗದಿಯಾಗಿದೆ ಎಂಬ ಮಾತುಗಳೆಲ್ಲ ಕೇಳಿಬಂದವು. ಇದಕ್ಕಾಗಿ ಪಕ್ಷಗಳು ತಮ್ಮ ಶಾಸಕರನ್ನು ಒಂದೆಡೆ ಸೇರಿಸುವ ಕಸರತ್ತನ್ನೂ ಆರಂಭಿಸಿವೆ ಎಂದೂ ತಿಳಿದುಬಂದಿತ್ತು. ಆದರೆ, ಈ ಬೆಳವಣಿಗೆಗಳ ಬಗ್ಗೆ ಪಕ್ಷಗಳಿಂದ ಯಾವುದೇ ಅಧಿಕೃತ ಹೇಳಿಕೆಗಳು ಮಾತ್ರ ಹೊರಬೀಳಲಿಲ್ಲ.
ಇದಕ್ಕೆ ಪ್ರತಿಕ್ರಿಯಿಸಿದ್ದ ಜೆಡಿಯು ಬಿಹಾರದ ರಾಜ್ಯ ಘಟಕದ ಅಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹ, ‘ಮಹಾಘಟಬಂಧನ್ನಲ್ಲಿ ಎಲ್ಲವೂ ಸರಿಯಿದೆ. ಹರಡುತ್ತಿರುವುದೆಲ್ಲ ವದಂತಿಗಳು. ಅವುಗಳಲ್ಲಿ ಸತ್ಯಾಂಶವಿಲ್ಲ’ ಎಂದು ಸಮಜಾಯಿಷಿ ನೀಡಿದರು. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಆರ್ಜೆಡಿ ಸಂಸದ ಮನೋಜ್ ಕೆ ಝಾ ಅವರು, ‘ನಿತೀಶ್ ಕುಮಾರ್ ಅವರೇ ಈ ಗೊಂದಲಗಳಿಗೆ ಆದಷ್ಟು ಬೇಗ ತೆರೆ ಎಳೆಯುತ್ತಾರೆ’ ಎಂದು ತಿಳಿಸಿದರು.
ಬಿಹಾರದ ಪೂರ್ಣೆಯಾದಲ್ಲಿ ನಡೆಯಲಿರುವ ಕಾಂಗ್ರೆಸ್ನ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ತನ್ನ ಎಲ್ಲ 19 ಶಾಸಕರಿಗೆ ಸೂಚಿಸಿದೆ. ಈ ಮೂಲಕ ಅದು ತನ್ನ ಶಾಸಕರು ಪಕ್ಷಾಂತರ ಮಾಡದಂತೆಯೂ ಕ್ರಮ ವಹಿಸಲು ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.