ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಶೆ ಕಾರು ದುರಂತ: ಚಾಲಕನೊಂದಿಗೆ ಜಗಳವಾಡಿ ಕೀ ಪಡೆದಿದ್ದ ಬಾಲಕ

Published 24 ಮೇ 2024, 13:19 IST
Last Updated 24 ಮೇ 2024, 13:19 IST
ಅಕ್ಷರ ಗಾತ್ರ

ಪುಣೆ: ಪುಣೆಯಲ್ಲಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾದ ಪೋಶೆ ಕಾರು ಅಪಘಾತ ದುರಂತಕ್ಕೂ ಮೊದಲು ಆರೋಪಿಯಾಗಿರುವ ಬಾಲಕನು ತನ್ನ ಕಾರು ಚಾಲಕನೊಂದಿಗೆ ಜಗಳವಾಡಿ ಕೀ ಪಡೆದು, ಕಾರು ಚಾಲನೆ ಮಾಡಿದ್ದ ಎಂಬ ಸಂಗತಿ ಪೊಲೀಸ್ ವಿಚಾರಣೆ ವೇಳೆ ಬಹಿರಂಗಗೊಂಡಿದೆ.

12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದರ ಬೆನ್ನಲ್ಲೇ ಸ್ನೇಹಿತರೊಂದಿಗೆ ಸಂಭ್ರಮಿಸಲು ಪುಣೆಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಮಗ ಹಾಗೂ ಆತನ ಸ್ನೇಹಿತರು ಹೊಟೇಲಿಗೆ ಹೋಗಿದ್ದರು. ಅಲ್ಲಿಂದ ಮರಳುವ ಸಂದರ್ಭದಲ್ಲಿ ಪೋಶೆ ಕಾರು ನುಗ್ಗಿದ ರಭಸಕ್ಕೆ ದ್ವಿಚಕ್ರವಾಹನಕ್ಕಿ ಡಿಕ್ಕಿಯಾಗಿತ್ತು. ಇದರಲ್ಲಿ 24 ವರ್ಷದ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು. ಈ ಕುರಿತಂತೆ ಕಾರು ಮಾಲೀಕರಾದ ಬಾಲಕನ ಅಜ್ಜ ಹಾಗೂ ಚಾಲಕನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

‘ಬಾಲಕನ ಮೇಲೆ ನಂಬಿಕೆ ಇಟ್ಟು ಕಾರಿನ ಕೀಲಿಯನ್ನು ನೀಡಿದೆ. ಜತೆಗೆ ಪಾರ್ಟಿಯ ಖರ್ಚಿಗಾಗಿ ತನ್ನ ಕ್ರೆಡಿಟ್ ಕಾರ್ಡ್‌ ಅನ್ನೂ ಕೊಟ್ಟಿದ್ದೆ. ಆದರೆ ಅದು ದುರಂತದಲ್ಲಿ ಅಂತ್ಯವಾಗುತ್ತದೆ ಎಂದುಕೊಂಡಿರಲಿಲ್ಲ’ ಎಂದು ಕಾರಿನ ಮಾಲೀಕ ಪೊಲೀಸ್ ತನಿಖೆ ಸಂದರ್ಭದಲ್ಲಿ ಬೇಸರಪಟ್ಟುಕೊಂಡರು ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ವಡ್ಗಾಂವ್‌ ಶೆರ್ರಿಯಲ್ಲಿರುವ ತನ್ನ ಬಂಗಲೆಯಿಂದ ಪೋಶೆ ಕಾರಿನಲ್ಲಿ ಕೊಜಿ ಪಬ್‌ಗೆ ಬಾಲಕ ಹಾಗೂ ಆತನ ಸ್ನೇಹಿತರು ಬಂದಿದ್ದರು. ನಂತರ ಬ್ಲಾಕ್ ಕ್ಲಬ್‌ಗೆ ತೆರಳಿದ್ದರು. ಇವರೊಂದಿಗೆ ಮತ್ತೊಂದು ಕಾರಿನಲ್ಲಿ ಮನೆಯ ಕಾರು ಚಾಲಕ ಹಾಗೂ ಇತರ ಸಿಬ್ಬಂದಿ ಪೋಶೆ ಕಾರನ್ನು ಅನುಸರಿಸಿದ್ದರು.

ಪಬ್‌ನಲ್ಲಿ ಬಾಲಕ ಹಾಗೂ ಆತನ ಸ್ನೇಹಿತರ ಪಾರ್ಟಿಯ ಮೊತ್ತ ₹48 ಸಾವಿರವಾಗಿತ್ತು. ಬ್ಲಾಕ್‌ ಕ್ಲಬ್‌ನಿಂದ ಹೊರಬರುವ ಹೊತ್ತಿಗೆ ಬಾಲಕ ಪಾನಮತ್ತನಾಗಿದ್ದ. ಅಂತ ಪರಿಸ್ಥಿತಿಯಲ್ಲೂ ಪೋಶೆ ಕಾರು ಚಾಲನೆ ಮಾಡುವುದಾಗಿ ಬಾಲಕ ಹಟ ಹಿಡಿದಿದ್ದ. ಸುರಕ್ಷತೆಯ ದೃಷ್ಟಿಯಿಂದ ಚಾಲಕ ಅದನ್ನು ನಿರಾಕರಿಸಿದ್ದ. ಕಾರನ್ನು ಪಾರ್ಕಿಂಗ್‌ನಿಂದ ಹೊರತಂದ ಚಾಲಕ, ಬಾಲಕನ ತಂದೆಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದ ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.

‘ಮಗನಿಗೆ ಕಾರು ಕೊಡು ಎಂದು ಸೂಚನೆ ನೀಡಿದ ತಂದೆ ಈಗ ಪೊಲೀಸ್ ಬಂಧನದಲ್ಲಿದ್ಧಾರೆ. ಅಪಘಾತ ನಡೆದ ಸಂದರ್ಭದಲ್ಲಿ ಬಾಲಕ ಕಾರು ಚಾಲನೆ ಮಾಡುತ್ತಿದ್ದ, ಪಕ್ಕದ ಆಸನದಲ್ಲಿ ಚಾಲಕ ಹಾಗೂ ಹಿಂಬದಿಯ ಆಸನದಲ್ಲಿ ಸ್ನೇಹಿತರು ಕುಳಿತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. 

ಚಾಲನೆಯ ಸಂದರ್ಭದಲ್ಲಿ ನಿರ್ಧಾರ ಮತ್ತು ನಿಯಂತ್ರಣ ಎರಡನ್ನು ಬಾಲಕ ಕಳೆದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆತನನ್ನು ವಯಸ್ಕ ಎಂದು ಪರಿಗಣಿಸುವಂತೆಯೂ ಬಾಲಾಪರಾಧ ನ್ಯಾಯಾಲಯವನ್ನು ಕೋರಿದ್ದಾರೆ. ಬಾಲಾಪರಾಧ ನ್ಯಾಯಾಲಯವು ಆರಂಭದಲ್ಲಿ ಬಾಲಕನಿಗೆ ಜಾಮೀನು ಮಂಜೂರು ಮಾಡಿತ್ತು. ಜಾಮೀನು ನೀಡಲು ರಸ್ತೆ ಅಪಘಾತಗಳ ಕುರಿತು 300 ಪದಗಳ ನಿಬಂಧನೆ ಬರೆಯುವ ಷರತ್ತು ವಿಧಿಸಿತ್ತು. ಆದರೆ ತ್ವರಿತವಾಗಿ ಜಾಮೀನು ಮಂಜೂರು ಮಾಡಿದ್ದು ಮತ್ತು ಅದಕ್ಕಾಗಿ ವಿಧಿಸಿದ್ದ ಷರತ್ತು ಕುರಿತು ಸಾರ್ವಜನಿಕ ವಲಯ ಹಾಗೂ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗಳು ನಡೆದ ಬೆನ್ನಲ್ಲೇ, ಬಾಲಕನ ಜಾಮೀನನ್ನು ರದ್ದುಪಡಿಸಿ ಜೂನ್ 5ರವರೆಗೆ ನಿರೀಕ್ಷಣಾ ಮಂದಿರದಲ್ಲಿರಿಸಲು ನ್ಯಾಯಾಲಯ ಆದೇಶಿಸಿತು.

ಸದ್ಯ ತನಿಖೆ ಪ್ರಗತಿಯಲ್ಲಿದೆ. ಇಂಥ ಘಟನೆ ಭವಿಷ್ಯದಲ್ಲಿ ಮರುಕಳಿಸದಂತೆ ಪುಣೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT