ಇಲ್ಲದ ದಾಖಲೆ: ವೃದ್ಧ ಆತ್ಮಹತ್ಯೆಗೆ ಯತ್ನ
‘2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಸುದ್ದಿ ತಿಳಿದ ಬಳಿಕ ಭಯಭೀತಗೊಂಡ 63 ವರ್ಷದ ಅಶೋಕ್ ಸರ್ದಾರ್ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ವೃದ್ಧರನ್ನು ಆರ್ಜಿ ಕರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಂದು ಕಾಲನ್ನು ಕತ್ತರಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ’ ಎಂದು ಪೊಲೀಸರು ತಿಳಿಸಿದರು. ‘ವಿಷಯ ಗೊತ್ತಾದ ದಿನದಿಂದ ಅವರು ಭಯಗೊಂಡಿದ್ದರು. ‘ನನ್ನ ಬಳಿ ದಾಖಲೆಗಳು ಇಲ್ಲ. ನನ್ನನ್ನು ದೇಶದಿಂದ ಹೊರಹಾಕಬಹುದು’ ಎಂದು ಭಯಗೊಂಡ ಕಾರಣದಿಂದಲೇ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಕುಟುಂಬ ಆರೋಪಿಸುತ್ತಿದೆ’ ಎಂದು ತಿಳಿಸಿದರು. ಸರ್ದಾರ್ ಅವರು ಸೈಕಲ್ ರಿಕ್ಷಾ ಚಾಲಕರಾಗಿದ್ದರು.