ನವದೆಹಲಿ: ಭಾರತದಲ್ಲಿ ಹಿಂದುತ್ವದ ‘ರಕ್ಷಣೆ’ಗಾಗಿ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿತು.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠವು, ‘ಇಂಥ ಮನವಿಗಳನ್ನು ಒಳಗೊಂಡ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸುವುದಿಲ್ಲ‘ ಎಂದು ಸ್ಪಷ್ಟಪಡಿಸಿತು.
ಮನವಿಯನ್ನು ಉಲ್ಲೇಖಿಸಿ, ‘ಕೆಲವರು ಭಾರತದಲ್ಲಿ ಇಸ್ಲಾಂ ಸಂರಕ್ಷಿಸಿ, ಇನ್ನೂ ಕೆಲವರು ಕ್ರೈಸ್ತಧರ್ಮ ಸಂರಕ್ಷಿಸಿ ಎನ್ನಬಹುದು’ ಎಂದೂ ಅಭಿಪ್ರಾಯಪಟ್ಟಿತು. ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹಸಾನುದ್ದೀನ್ ಅಮಾನ್ಉಲ್ಲಾ ಈ ಪೀಠದ ಇತರ ಸದಸ್ಯರು.
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ವಾದ ಮಂಡಿಸಲು ಸ್ವತಃ ಹಾಜರಿದ್ದರು. ಅರ್ಜಿದಾರರು ಶಿಕ್ಷಣದ ಪಠ್ಯಕ್ರಮವೊಂದನ್ನು ಉಲ್ಲೇಖಿಸಿದಾಗ, ‘ಪಠ್ಯಕ್ರಮವನ್ನು ರೂಪಿಸುವುದು ಸರ್ಕಾರ’ ಎಂದು ಪೀಠ ಹೇಳಿತು.