ಅಮರಾವತಿ (ಆಂಧ್ರಪ್ರದೇಶ): ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಶನಿವಾರ ಆಂಧ್ರಪ್ರದೇಶದ ಎಲ್ಲಾ 25 ಲೋಕಸಭಾ ಕ್ಷೇತ್ರಗಳು ಮತ್ತು 175 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಕಡಪ ಜಿಲ್ಲೆಯ ಇಡುಪುಲಪಾಯದಲ್ಲಿ ಪಕ್ಷದ ವರಿಷ್ಠ ಮತ್ತು ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಸಮಾಧಿಯ ಸಮೀಪ ಆಡಳಿತಾರೂಢ ವೈಎಸ್ಆರ್ಸಿಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತು.
ಬಾಪಟ್ಲ ಸಂಸದ ನಂದಿಗಂ ಸುರೇಶ್ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಓದಿದರೆ, ಕಂದಾಯ ಸಚಿವ ಡಿ. ಪ್ರಸಾದ ರಾವ್ ಅವರು ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ವಾಚಿಸಿದರು.
YSRCP MP Candidates list for 2024 Elections.
— YSR Congress Party (@YSRCParty) March 16, 2024
Women- 5
BC-11
SC-4
ST-1#YSRCPCandidates#YSRCPTarget175#YSJaganAgain#VoteForFan pic.twitter.com/SxYV5N7oeI
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಸಾದ ರಾವ್, '2019 ರಲ್ಲಿ ಜಗನ್ ಅಧಿಕಾರಕ್ಕೆ ಬಂದ ನಂತರ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ಬಡ ಮತ್ತು ಅಲ್ಪಸಂಖ್ಯಾತ ವರ್ಗದ ಜನರಿಗೆ ರಾಜಕೀಯ ಅಧಿಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಲಾಗಿದೆ' ಎಂದು ಹೇಳಿದರು.
ಶೇ 50 ರಷ್ಟು ಸ್ಥಾನಗಳನ್ನು ಎಸ್ಸಿ, ಎಸ್ಟಿ, ಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಹಂಚಿಕೆ ಮಾಡಲಾಗಿದೆ.
175 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಪೈಕಿ 29 ಎಸ್ಸಿ ಸಮುದಾಯದವರು, 7 ಎಸ್ಟಿ, 48 ಬಿಸಿ, 91 ಒಸಿ, ಜತೆಗೆ 19 ಮಹಿಳಾ ಅಭ್ಯರ್ಥಿಗಳಿದ್ದಾರೆ. ಎಸ್ಸಿ, ಎಸ್ಟಿ, ಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ 84 ಎಂಎಲ್ಎ ಮತ್ತು 16 ಎಂಪಿ ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.
ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಸ್ಸಿ ಸಮುದಾಯದ ನಾಲ್ವರು, ಒಬ್ಬರು ಎಸ್ಟಿ, 11 ಬಿಸಿ ಮತ್ತು 9 ಒಸಿ ಹಾಗೂ ಐವರು ಮಹಿಳೆಯರು ಇದ್ದಾರೆ.
ಬಿ. ಝಾನ್ಸಿ ಲಕ್ಷ್ಮಿ ಅವರು ವಿಶಾಖಪಟ್ಟಣಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಜಿ. ಉಮಾ ಬಾಲಾ ನರಸಾಪುರಂನ ಅಭ್ಯರ್ಥಿಯಾಗಿದ್ದಾರೆ.
ವಿ. ವಿಜಯಸಾಯಿ ರೆಡ್ಡಿ ನೆಲ್ಲೂರಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ನಿರೀಕ್ಷೆಯಂತೆ ಹಾಲಿ ಸಂಸದ ವೈ.ಎಸ್.ಅವಿನಾಶ್ ರೆಡ್ಡಿ ಕಡಪ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಜಗನ್ ಮೋಹನ್ ರೆಡ್ಡಿ ಅವರು ರಾಜ್ಯದ ಪ್ರಮುಖ ಕ್ಷೇತ್ರ ಪುಲಿವೆಂದುಲ ವಿಧಾನಸಭಾ ಕ್ಷೇತ್ರ, ಕೃಷ್ಣ ರಾಘವ ಜಯೇಂದ್ರ ಭಾರತ್ ಕುಪ್ಪಂ ಕ್ಷೇತ್ರ ಮತ್ತು ಎಂ. ಲಾವಣ್ಯ ಮಂಗಳಗಿರಿಯಿಂದ ಸ್ಪರ್ಧಿಸಲಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿ (CMO)ಯ ಅಧಿಕೃತ ಹೇಳಿಕೆಯ ಪ್ರಕಾರ 77 ಪ್ರತಿಶತ ಅಥವಾ 153 ಸ್ಪರ್ಧಿಗಳು , ಪದವೀಧರರಾಗಿದ್ದಾರೆ. 58 ಅಭ್ಯರ್ಥಿಗಳು ಸ್ನಾತಕೋತ್ತರ ಪದವೀಧರರು ಮತ್ತು 6 ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ, 17 ವೈದ್ಯರು, 15 ವಕೀಲರು, 34 ಇಂಜಿನಿಯರ್ಗಳು, ಐವರು ಶಿಕ್ಷಕರು, ಇಬ್ಬರು ಮಾಜಿ ಅಧಿಕಾರಿಗಳು, ಒಬ್ಬ ರಕ್ಷಣಾ ಸಿಬ್ಬಂದಿ ಮತ್ತು ಪತ್ರಕರ್ತರು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.