ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿಯ ವಿನು ಎಂಬವರ ಹಳ್ಳಿಕಾರ್ ತಳಿಯ ಒಂಟಿ ಎತ್ತನ್ನು ಶುಕ್ರವಾರ ₹10.25 ಲಕ್ಷ ದಾಖಲೆ ಬೆಲೆಗೆ ಚಿಕ್ಕಮಗಳೂರು ತಾಲ್ಲೂಕು ತೇಗೂರಿನ ಮಂಜಣ್ಣ ಎಂಬವವರು ಖರೀದಿಸಿದ್ದಾರೆ.
ಹಾಸನ, ಚಿಕ್ಕಮಗಳೂರು, ತರೀಕೆರೆ, ತೇಗೂರು ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಓಟದ ಸ್ಪರ್ಧೆಗಳಲ್ಲಿ ಎತ್ತು ಬಹುಮಾನಗಳನ್ನು ಪಡೆದಿತ್ತು. ಗಾಳಿ ವೇಗದಲ್ಲಿ ನುಗ್ಗುವ ಎತ್ತಿಗೆ ‘ಬ್ರ್ಯಾಂಡ್ ಅಣ್ಣಪ್ಪ’ ಎಂದು ವಿನು ಹೆಸರು ಇಟ್ಟಿದ್ದರು.
ಅವರು ಒಂದೂವರೆ ವರ್ಷದ ಹಿಂದೆ ‘ಗಗನ್’ ಎಂಬ ಹೆಸರಿನ ಮತ್ತೊಂದು ಎತ್ತನ್ನು ₹7.68 ಲಕ್ಷಕ್ಕೆ ಮಾರಿದ್ದರು. ಅದನ್ನೂ ತೇಗೂರಿನ ಮಂಜಣ್ಣ ಅವರೇ ಖರೀದಿಸಿದ್ದರು.
‘ನನ್ನ ಬಳಿ ಎತ್ತಿನ ಗಾಡಿ ಓಟದ ಸ್ಪರ್ಧೆಗಾಗಿ ಸಾಕಿರುವ ಮತ್ತೊಂದು ಎತ್ತು ಇದೆ. ಅದಕ್ಕೆ ‘ಅಣ್ಣಪ್ಪ’ ಎಂದು ಹೆಸರಿಟ್ಟಿದ್ದೇನೆ. ಚಿತ್ರ ನಟ ದರ್ಶನ್ ಖರೀದಿಗೆ ಕೇಳಿದ್ದಾರೆ. ಇದು ನನಗೆ ಪ್ರಿಯವಾದ ಎತ್ತಾಗಿದ್ದು, ಮಾರುವುದಿಲ್ಲ’ ಎಂದು ವಿನು ‘ಪ್ರಜಾವಾಣಿ’ಗೆ ತಿಳಿಸಿದರು.