ಬೆಂಗಳೂರು:‘ ಗೃಹ ಇಲಾಖೆಯಲ್ಲಿ ಗರಿಷ್ಠ ಹಸ್ತಕ್ಷೇಪ ನಡೆಯುತ್ತಿದೆ. ಗೃಹ ಸಚಿವರೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಆಗದೇ ಅಸಹಾಯಕರಾಗಿದ್ದಾರೆ. ಆದ್ದರಿಂದ, ಸೂಕ್ಷ್ಮತೆ ಹೊಂದಿರುವ ಜಿ.ಪರಮೇಶ್ವರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಯಾವ ಪೊಲೀಸ್ ಅಧಿಕಾರಿಯೂ ದಕ್ಷವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಗೃಹ ಇಲಾಖೆಯ ಈ ಜಡತ್ವವನ್ನು ಹೋಗಲಾಡಿಸಿ ವ್ಯವಸ್ಥೆ ಸರಿಪಡಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣವಾಗುತ್ತಿದೆ. ಈ ಒಂದು ವರ್ಷದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಮತಾಂಧ ಶಕ್ತಿಗಳು ವಿಜೃಂಭಿಸುತ್ತವೆ. ತುಷ್ಟೀಕರಣದ ರಾಜಕಾರಣವೂ ಸೇರಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು.
ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ವರ್ಗಾವಣೆ ಮತ್ತು ಹುದ್ದೆಗಳಿಗೆ ದರ ಪಟ್ಟಿ ನಿಗದಿಯಾಗಿದೆ. ಸಿಎಂ ಕಚೇರಿಯಿಂದ ವಿವಿಧ ಕಚೇರಿಗಳು, ಶಾಸಕರು ಮಧ್ಯವರ್ತಿಗಳ ಕೈಜೋಡಿಸಿರುವುದರಿಂದ ಕಾನೂನು– ಸುವ್ಯವಸ್ಥೆ ಕಾಪಾಡಲು ಹೇಗೆ ಸಾಧ್ಯ ಎಂದು ಅಶ್ವತ್ಥನಾರಾಯಣ ಪ್ರಶ್ನಿದರು.
ಸಿಟಿ ಕ್ರೈಮ್ ಬ್ಯೂರೋ ಮತ್ತು ನ್ಯಾಷನಲ್ ಕ್ರೈಂ ಬ್ಯೂರೊ ಪ್ರಕಾರ ಅಪರಾಧ ಪ್ರಮಾಣ ಶೇ 60 ಕ್ಕಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗಂತೂ ಸುರಕ್ಷತೆ ಇಲ್ಲ. ನೇಹಾ ಕೊಲೆ ಬಳಿಕ ಅಂಜಲಿ ಹತ್ಯೆ ನಡೆದಿದೆ. ಅಂಜಲಿ ಕುಟುಂಬದವರು ಆಕೆಗೆ ಬೆದರಿಕೆ ಇರುವ ಕುರಿತು ಠಾಣೆಗೆ ತಿಳಿಸಿದ್ದರೂ ಸಹ ಕ್ರಮವಹಿಸಲು ಪೊಲೀಸರು ವಿಫಲವಾಗಿದ್ದಾರೆ. ಭಂಡ ಸರ್ಕಾರ ಎಲ್ಲ ಸೂಕ್ಷ್ಮತೆಯನ್ನೂ ಕಳೆದುಕೊಂಡಿದೆ ಎಂದು ಅವರು ಟೀಕಿಸಿದರು.