ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷ ಸಾಕು, ಸಂರಕ್ಷಣೆ ಬೇಕು: ಒಳನೋಟಕ್ಕೆ ಪ್ರತಿಕ್ರಿಯೆಗಳು

Last Updated 5 ಫೆಬ್ರುವರಿ 2023, 12:54 IST
ಅಕ್ಷರ ಗಾತ್ರ

‘ಸಂಘರ್ಷ ಸಾಕು; ಸಂರಕ್ಷಣೆ ಬೇಕು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಫೆಬ್ರವರಿ 05) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

***

‘ವನ್ಯಜೀವಿಗಳ ಸಂಖ್ಯೆ ವೃದ್ಧಿ’
ಅರಣ್ಯ ಇಲಾಖೆಯ ಕಠಿಣ ಕಾನೂನುಗಳಿಂದ ಪ್ರಸ್ತುತ ವನ್ಯಜೀವಿಗಳ ಸಂಖ್ಯೆ ವೃದ್ಧಿಸುತ್ತಿದೆ. ಆದರೆ, ಅರಣ್ಯ ಭೂಮಿಯ ಒತ್ತುವರಿ ಮಾಡಿಕೊಳ್ಳುವುದರಿಂದ ವನ್ಯಜೀವಿಗಳು ಅವಲಂಬಿಸಿರುವ ನೆಲೆ, ಕಾರಿಡಾರ್‌ಗಳು ನಾಶವಾಗುತ್ತಿವೆ. ಗಣಿಗಾರಿಕೆಯಿಂದ ಅವುಗಳ ಆವಾಸ ಸ್ಥಾನ ಛಿದ್ರಗೊಂಡು ಅವುಗಳ ಬದುಕು ನಿರ್ದಯವಾಗುತ್ತಿದೆ. ಆಹಾರ, ಆಶ್ರಯ, ಸಂಪರ್ಕವನ್ನು ಅರಸುತ್ತಾ ತೆರಳುವಾಗ ಮಾನವ ವನ್ಯಜೀವಿಗಳ ಸಂಘರ್ಷಗಳು ಸಂಭವಿಸುತ್ತಿವೆ. ಜನಸಂಖ್ಯೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗಾಗಿ ಅರಣ್ಯ ನಾಶ ಮಾಡಲಾಗುತ್ತಿದೆ. ಆದರೆ, ವನ್ಯಜೀವಿಗಳ ಮೇಲೆ ತಾತ್ಸಾರ ತೋರದೆ ಅವುಗಳನ್ನು ಉಳಿಸಿ ಬೆಳೆಸಿ ಸಂರಕ್ಷಣೆ ಮಾಡುವ ಕೆಲಸವಾಗಬೇಕಿದೆ. ವನ್ಯಜೀವಿಗಳಿಗೂ ನಮ್ಮಂತೆ ಬದುಕುವ ಸ್ವಾತಂತ್ರ್ಯವಿದೆ.
–ಅಜ್ಮೀರ್ ಕೆ., ಗಸ್ತು ವನಪಾಲಕ, ಅರಣ್ಯ ಇಲಾಖೆ, ಹೊಸಪೇಟೆ

***

‘ಅರಣ್ಯ ಸಂಪತ್ತು ರಕ್ಷಿಸಲು ಕಠಿಣ ಕಾನೂನು ಜಾರಿಗೊಳಿಸಿ’
ಅರಣ್ಯ ಒತ್ತುವರಿ ಮತ್ತು ಕಾಡಿನ ನಾಶ ಮಾಡುವುದರಿಂದ ಮಾನವ ಮತ್ತು ಪ್ರಾಣಿಗಳ ಮಧ್ಯ ಸಂಘರ್ಷ ಅಧಿಕವಾಗುತ್ತಿದೆ. ಅರಣ್ಯ ಮತ್ತು ಅದರ ಸಂಪತ್ತನ್ನು ರಕ್ಷಿಸಲು ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ವನ್ಯಜೀವಿಗಳ ಸಂರಕ್ಷಣೆಯಲ್ಲಿ ಮಾನವನ ಸಹಕಾರ ಬಹಳ ಮುಖ್ಯ. ಪ್ರಾಣಿಗಳಿಗೆ ಕಾಡು ಉಸಿರಾದರೆ, ಮನುಷ್ಯರಿಗೆ ಹಸಿರೇ ಉಸಿರಾಗಿದ್ದು, ಅರಣ್ಯವನ್ನು ಬೆಳೆಸುವುದರ ಜೊತೆಗೆ ಅದರ ಸಂರಕ್ಷಣೆ ಮಾಡಬೇಕು.
–ಶಾಂತ ಕುಮಾರ ಎಚ್., ರಾಯಚೂರು

***

‘ವನ್ಯಜೀವಿಗಳ ಬಗ್ಗೆ ಇರುವ ಅಪನಂಬಿಕೆ ಹೊಗಲಾಡಿಸಿ’
ನೈಸರ್ಗಿಕ ಕಾಡನ್ನು ನಾಡನ್ನಾಗಿ ಪರಿವರ್ತಿಸುವ ಕೆಲಸವನ್ನು ಬಿಡಬೇಕು. ಕಾಡುಗಳು ಗುಣಮಟ್ಟ ಕಳೆದುಕೊಳ್ಳುತ್ತಿರುವದರಿಂದ ವನ್ಯಜೀವಿಗಳು ಮಾನಸಿಕ ಆಘಾತಕ್ಕೆ ಒಳಗಾಗಿ ನಾಡಿಗೆ ಪ್ರವೇಶಿಸುತ್ತಿವೆ. ಕಾಡು ಪ್ರಾಣಿಗಳ ಬಗ್ಗೆ ಜನರಲ್ಲಿರುವ ಅಪನಂಬಿಕೆ ಮತ್ತು ಭಯದ ವಾತಾವರಣವನ್ನು ಕಡಿಮೆಗೊಳಿಸುವ ಕೆಲಸವಾಗಬೇಕು. ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸುವ ಸರ್ಕಾರದ ನಡೆ ಖಂಡನೀಯ. ಇದರಿಂದ ವನ್ಯಜೀವಿಗಳು ನಾಶವಾಗುತ್ತವೆ. ಮುಂದಿನ ಪೀಳಿಗೆಗೆ ಅರಣ್ಯ ಜೀವ ಸಂಕುಲವನ್ನು ಚಿತ್ರಗಳಲ್ಲಿ ಪರಿಚಯಸಬೇಕಾಗುತ್ತದೆ.
–ವಿ.ಜಿ.ಇನಾಮದಾರ, ವಿಜಯಪುರ

***

ಕಾಡು ರಕ್ಷಿಸಿ, ವನ್ಯಪ್ರಾಣಿಗಳನ್ನು ಉಳಿಸಿ
ಆಧುನಿಕ ಜಗತ್ತಿಗೆ ತಕ್ಕಂತೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಮಾನವನ ಅತಿಯಾದ ಉಪಟಳದಿಂದ ಕಾಡು ಪ್ರಾಣಿಗಳು ನಾಡಿಗೆ ಬರುವಂತಾಗಿದೆ. ಅದಕ್ಕಾಗಿ ಸರ್ಕಾರವು ಕಾಡಂಚಿನಲ್ಲಿರುವ ಭೂಮಿಯನ್ನು ಕಾಡು ಪ್ರಾಣಿಗಳಿಗೆ ಮೀಸಲಿಡಬೇಕು. ಪರಿಸರ ಸಮತೋಲನ ಕಾಯ್ದುಕೊಳ್ಳುವ ಕೆಲಸವಾಗಬೇಕು. ಈ ವನ್ಯಪ್ರಾಣಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾಡನ್ನು ಉಳಿಸಿ ಬೆಳೆಸಿ ಕಾಡು ಪ್ರಾಣಿಗಳನ್ನು ರಕ್ಷಿಸುವ ಕೆಲಸ ಮಾಡಬೇಕು.
–ಬಸವರಾಜ ಮ. ಕೋಡಿ, ಗುರ್ಲಾಪೂರ, ಮೂಡಲಗಿ, ಬೆಳಗಾವಿ

***

‘ಶೋಲಾ ಅರಣ್ಯಗಳ, ಹುಲ್ಲುಗಾವಲನ್ನು ಮರುಸ್ಥಾಪಿಸಿ’
ಸುಮಾರು ನಲವತ್ತು ಐವತ್ತು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಸಾಕಷ್ಟು ಶೋಲಾ ಅರಣ್ಯ ಪ್ರದೇಶಗಳು ಇದ್ದವು. ಶೋಲಾ ಹುಲ್ಲುಗಾವಲುಗಳು ದನಕರುಗಳಿಗೆ ಕಾಡು ಕೋಣಗಳಿಗೆ, ಜಿಂಕೆಗಳಿಗೆ ಆಹಾರ ಒದಗಿಸುತ್ತಿದ್ದವು. ಗುಡ್ಡಗಳ ಮಧ್ಯದ ಸಮತಟ್ಟಾದ ಪ್ರದೇಶದಲ್ಲಿ ದಟ್ಟ ಕಾಡುಗಳು ಇದ್ದವು. ಮಾವು ನೇರಳೆ ಮುಂತಾದ ಹಣ್ಣು ಬಿಡುವ ಮರಗಳು, ಬಳ್ಳಿಗಳು, ಗೆಡ್ಡೆ–ಗೆಣಸುಗಳು ಹೇರಳವಾಗಿದ್ದವು. ಹಣ್ಣು ಬಿಡುವ ಮರಗಳು ಹೂವುಗಳನ್ನು ಸಹ ಬಿಡುವುದರಿಂದ ಸಾಕಷ್ಟು ಜೇನುಗಳಿದ್ದವು. ಹಾಗಾಗಿ, ಜನವಸತಿಯಿಂದ ಐದು ಕಿ.ಮೀ ದೂರವಿದ್ದ ಒಂಟಿ ಮನೆಯಲ್ಲಿ ವಾಸವಾಗಿದ್ದರೂ ನಾವು ಚಿಕ್ಕಂದಿನಲ್ಲಿ ಕಾಡು ಕೋಣಗಳು, ಜಿಂಕೆಗಳನ್ನು ಮನೆಯ ಸಮೀಪ ನೋಡಿದ್ದೇ ಇಲ್ಲ. ಏನಿದ್ದರೂ ಗದ್ದೆ ಕೊಯ್ಲಿನ ಕಾಲದಲ್ಲಿ ಕಾಡು ಹಂದಿಗಳು ಅಷ್ಟಿಷ್ಟು ಕಾಟ ಕೊಡುತ್ತಿದ್ದವು.

ಆದರೆ, ಈಗ ಚಿತ್ರಣ ಬದಲಾಗಿದೆ. ಶೋಲಾ ಅರಣ್ಯವು ಒತ್ತುವರಿದಾರರ ಕೈಯಲ್ಲಿ ನಲುಗಿದರೆ ಈ ಒತ್ತುವರಿಯನ್ನು ತಡೆಗಟ್ಟುವುದಕ್ಕಾಗಿ ಅರಣ್ಯ ಇಲಾಖೆಯು ಅಕೇಶಿಯಾ ನೆಡುತೋಪುಗಳನ್ನು ಬೆಳೆಸಿದೆ. ಇದರಿಂದಾಗಿ ಸಸ್ಯಾಹಾರಿ ಕಾಡುಪ್ರಾಣಿಗಳಿಗೆ ಮೇಯಲು ಹುಲ್ಲು ಇಲ್ಲದಂತಾಗಿದೆ. ಆಹಾರ ಹುಡುಕಿಕೊಂಡು ಕಾಫಿ ತೋಟ ಅಡಿಕೆ ಬಾಳೆ ತೋಟಗಳಿಗೆ ನುಗ್ಗುತ್ತಿವೆ. ತೋಟದ ಹುಲ್ಲು, ಬಾಳೆ ಗಿಡಗಳು, ಎಳೆಯ ಅಡಿಕೆ ಸಸಿಗಳು, ಕಾಫಿ ಹಣ್ಣು, ಕಾಫಿ ಎಲೆಗಳು ಇವನ್ನೆಲ್ಲ ತಿಂದು ಯಾಲಕ್ಕಿ ಗಿಡಗಳನ್ನು ತುಳಿದು ಕಾಫಿ ರೆಂಬೆಗಳನ್ನು ಮುರಿದು ಓಡಾಡುತ್ತವೆ. ಇದರಿಂದಾಗಿ ತೋಟಗಳು ಹಾಳಾಗುತ್ತಿರುವುದಲ್ಲದೆ ಅಲ್ಲಿಗೆ ಕೆಲಸ ಮಾಡಲು ಹೋಗುವವರು ಸಹ ಹೆದರುವಂತಾಗಿದೆ.

ಈ ಸಮಸ್ಯೆಗೆ ಹಲವು ಆಯಾಮಗಳಿವೆ. ಹಾಗಾಗಿ ಪರಿಹಾರಗಳನ್ನು ಸಹ ಆಯಾ ಪ್ರದೇಶದ ವಸ್ತುಸ್ಥಿತಿಗೆ ಅನುಗುಣವಾಗಿ ಕಂಡುಕೊಳ್ಳಬೇಕಾಗಿದೆ. ಅವುಗಳಲ್ಲೊಂದು ಶೋಲಾ ಅರಣ್ಯಗಳ ಮತ್ತು ಹುಲ್ಲುಗಾವಲುಗಳ ಮರು ಸ್ಥಾಪನೆ. ಅಕೇಶಿಯಾ ನೆಡುತೋಪುಗಳನ್ನ ತೆಗೆದು, ಸಾಧ್ಯ ಇರುವ ಕಡೆ ಹುಲ್ಲು ಬೆಳೆಯಲು ಅವಕಾಶ ಕೊಡಬೇಕು. ಇಲ್ಲವಾದಲ್ಲಿ ಕನಿಷ್ಠಪಕ್ಷ ಕಾಡು ಮರಗಳನ್ನಾದರೂ ನೆಡಬೇಕು. ನೆಡು ತೋಪುಗಳ ಅಂಚಿನಲ್ಲಿ ಒತ್ತುವರಿ ತಡೆಯಲು ಆ ಪ್ರದೇಶದಲ್ಲಿ ಸಹಜವಾಗಿ ಬೆಳೆಯುವ ಕಾಡಿನ ಮರಗಳನ್ನೇ ನೆಡಬೇಕು. ಅರಣ್ಯ ಇದ್ದ ಕಡೆ ಅದರಲ್ಲೂ ವಿಶೇಷವಾಗಿ ಶೋಲಾ ಗುಡ್ಡಗಳ ನಡುವಿನ ಕಣಿವೆಗಳಲ್ಲಿ ಹಣ್ಣು ಬಿಡುವ ಕಾಡು ಮರಗಳಾದ ನೇರಳೆ, ಹಲಸು, ಹೆಬ್ಬಲಸು ,ಮಾವು ಮುಂತಾದ ಮರಗಳನ್ನು ನೆಡಬೇಕು.
–ಡಾ.ಜಾನಕಿ ಸುಂದರೇಶ್, ನಿವೃತ್ತ ಪಶು ಸಂಗೋಪನಾ ಉಪನಿರ್ದೇಶಕರು, ಕಳಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT