ಬೆಂಗಳೂರು: ‘ವಿಧಾನಸೌಧದಲ್ಲಿ ಹೆಗ್ಗಣಗಳು ತುಂಬಿವೆ’ಎಂಬ ಮಾತುಇಷ್ಟು ದಿನ ವ್ಯಂಗ್ಯಕ್ಕೆ ಬಳಕೆಯಾಗುತ್ತಿತ್ತು. ಆದರೆ ಇಂದು ಈ ಮಾತು ನಿಜವಾಗಿದ್ದು ವಿಪರ್ಯಾಸ. ಸತ್ತ ಇಲಿಯ ದುರ್ನಾತಕ್ಕೆ ಬೇಸತ್ತ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಯಬೇಕಿದ್ದ ಕೊಠಡಿಯನ್ನೇ ಬದಲಿಸಿದ ಪ್ರಸಂಗವೂ ಇಂದು (ಅ.14) ವಿಧಾನಸೌಧದಲ್ಲಿ ನಡೆದುಹೋಯಿತು.
ವಿಧಾನಸೌಧದ 313ನೇಕೊಠಡಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಯೋಗವೊಂದನ್ನು ಭೇಟಿಯಾಗಿ ಚರ್ಚೆ ನಡೆಸಬೇಕಿತ್ತು. ಈ ಕೊಠಡಿ ಇಲಿಗಳ ದರ್ಬಾರ್ಗೆ ಹೆಸರುವಾಸಿ. ಇದಕ್ಕೆ ಪುಟವಿಟ್ಟಂತೆ ಇಂದು ಸತ್ತ ಇಲಿಯ ದುರ್ನಾತವೂ ಆವರಿಸಿಕೊಂಡಿತ್ತು.
ಕೊಠಡಿಗೆ ಬಂದ ಯಡಿಯೂರಪ್ಪ ಅವರಿಗೆ ದುರ್ನಾತ ಸಹಿಲು ಆಗಲಿಲ್ಲ. ‘ಅದೇನದು ದುರ್ವಾಸನೆ, ಮೊದಲು ಕ್ಲೀನ್ ಮಾಡಿಸ್ರೀ’ ಎಂದು ಮೇಲೆದ್ದರು.‘ಇಲ್ಲಿ ಬೇಡ, ನನ್ನ ಕಚೇರಿಯಲ್ಲೇ ಸಭೆ ಮಾಡೋಣ ಬನ್ನಿ’ ಎಂದು ಹೊರ ನಡೆದರು.
ಬಳಿಕ ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕೊಠಡಿಯಲ್ಲಿಯೇ ಸಭೆ ನಡೆಯಿತು. ಮುಖ್ಯಮಂತ್ರಿ ಸೂಚನೆ ನೀಡುವವರೆಗೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸತ್ತ ಇಲಿಯಾ ದುರ್ನಾತ ಸಹಿಸಿಕೊಂಡು ಅದೇ ಕೊಠಡಿಯಲ್ಲಿ ಕುಳಿತಿದ್ದರು.