ಹಾಸನ: ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಹೊಳೆನರಸೀಪುರದ ಸರ್ವಾಧಿಕಾರದ ಸಾಮ್ರಾಜ್ಯದಲ್ಲಿ ದುಡಿದು ತಿನ್ನುವವರ ಧ್ವನಿ ಅಡಗಿದೆ. ಹೊಟ್ಟೆಪಾಡಿಗಾಗಿ ಕೂಲಿ ಮಾಡುವವರು, ಮನೆಗೆಲಸದವರು, ರಸ್ತೆ ಬದಿ ವ್ಯಾಪಾರ ಮಾಡುವ ಅನೇಕ ಮಹಿಳೆಯರು, ಇನ್ನೂ ಅನೇಕರು ದೌರ್ಜನ್ಯದ
ಬಲಿಪಶುಗಳಾದರೂ, ಕರುಳ ಕುಡಿಗಾಗಿ ನೋವನ್ನು ಅದುಮಿಟ್ಟು ಒಡಲೊಳಗೆ ರೋದಿಸುತ್ತಿದ್ದಾರೆ.
ಪೆನ್ಡ್ರೈವ್ ಹಂಚಿಕೆ ಪ್ರಕರಣ ಬೆಳಕಿಗೆ ಬಂದ ಮೇಲೆ ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಅದೆಷ್ಟೋ ತಾಯಂದಿರಲ್ಲಿ ಇಷ್ಟುಕಾಲ ಸೆರಗೊಳಗೆ ಅವಿತಿಟ್ಟುಕೊಂಡಿದ್ದ ಕೆಂಡ ಸುಡಲಾರಂಭಿಸಿದೆ.
‘ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯರಲ್ಲಿ ಹಲವರ ಆಕ್ರೋಶ ಕಟ್ಟೆಯೊಡೆದಿದೆ. ದೂರು ನೀಡುವ ಇಚ್ಛೆಯೂ ಅವರಲ್ಲಿದೆ. ಆದರೆ, ತಮ್ಮ ಮಕ್ಕಳು, ಅವರ ಭವಿಷ್ಯ, ಸಾಮಾಜಿಕ ಅವಮಾನ ಎದುರಿಸಲು ಅಶಕ್ತರಾಗಿ ಅವರು ಸುಮ್ಮನಾಗಿದ್ದಾರೆ. ತಮ್ಮ ಮಗನ ವಯಸ್ಸಿನ ವ್ಯಕ್ತಿ ಬಲಾತ್ಕಾರದಿಂದ ದೌರ್ಜನ್ಯವೆಸಗಿರುವ ದುಃಸ್ವಪ್ನದಿಂದ ಅವರಿಗೆ ಹೊರಬರಲು ಆಗುತ್ತಿಲ್ಲ. ಆದರೆ, ಮಕ್ಕಳ ಒಳಿತನ್ನು ಯೋಚಿಸಿ ಅವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆಯೊಬ್ಬರು.
ಇದು ಕೌಟುಂಬಿಕ ಕಗ್ಗಂಟಿನಲ್ಲಿ ಸಿಲುಕಿರುವ ಹೆಣ್ಣು ಜೀವಗಳ ಕಥೆಯಾದರೆ, ರಾಜಕೀಯ ವ್ಯೂಹದೊಳಗೆ ಸಿಲುಕಿದವರದ್ದು ಇನ್ನೊಂದು ರೀತಿಯ ಅಸಹಾಯಕತೆ. ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಹಲವಾರು ಕಾರ್ಯಕರ್ತೆಯರ ಚಿತ್ರ, ವಿಡಿಯೊ ತುಣುಕುಗಳು ಊರ ತುಂಬೆಲ್ಲ ಹರಿದಾಡಿರುವ ಪೆನ್ಡ್ರೈವ್ನಲ್ಲಿವೆ. ಆದರೆ, ಪಕ್ಷದ ಬಲಾಢ್ಯರ ಆಮಿಷ, ಒತ್ತಡ, ದಬ್ಬಾಳಿಕೆ, ಕೌಟುಂಬಿಕ ಸಂಬಂಧಗಳು ಅವರು ದೂರು ನೀಡದಂತೆ ತಡೆಹಾಕಿವೆ. ಹೀಗಾಗಿ, ಅವರು ಮೌನಕ್ಕೆ ಶರಣಾಗಿದ್ದಾರೆ.
‘ವಿಕೃತಿಗೆ ಬಲಿಯಾದವರ ಬಗ್ಗೆ ಕರುಣೆ ತೋರುವ ಬದಲಾಗಿ ಕುಹಕದ, ಅನುಮಾನದ ಮಾತುಗಳನ್ನಾಡುವವರೇ ಹೆಚ್ಚಾಗಿದ್ದಾರೆ. ಜಾತಿ ಪ್ರಾಬಲ್ಯ ಮೆರೆಯುತ್ತಿದೆ. ಇದರಿಂದಾಗಿ, ಮಹಿಳೆಯರು ಮುಂದೆ ಬಂದು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಮೂರು ದಿನ ಮೊದಲು ಹರಿಬಿಟ್ಟ ಅಶ್ಲೀಲ ವಿಡಿಯೊದಲ್ಲಿ ಒಂದು ಪಕ್ಷಕ್ಕೆ ಸೇರಿದ ಸ್ತ್ರೀಯರೇ ಬಲಿಪಶುಗಳಾದ್ದರು. ರಾಜಕೀಯ ದಾಳವಾಗಿ ಇದನ್ನು ಬಳಸಿಕೊಳ್ಳಲಾಯಿತೇ ವಿನಾ ಸ್ತ್ರೀಯ ಮಾನ ಹರಾಜಾಗುವ ಬಗ್ಗೆ ಅರೆಕ್ಷಣವೂ ಯೋಚಿಸದಿರುವುದು ಸಮಾಜದ ನೈತಿಕತೆಯ ಕುಸಿತಕ್ಕೆ ಸಾಕ್ಷಿಯಾಗಿದೆ’ ಎಂದು ಬೇಸರಿಸಿದರು ಹೋರಾಟಗಾರ ಧರ್ಮೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.