ಮಂಡ್ಯ: ಭ್ರೂಣಹತ್ಯೆ ಜಾಲ ಪತ್ತೆಯಾದ ಬೆನ್ನಲ್ಲೇ ಜಿಲ್ಲೆಯಲ್ಲಿನ ಸ್ಲ್ಯಾನಿಂಗ್ ಕೇಂದ್ರಗಳ ತಪಾಸಣೆಗೆ ಅಧಿಕಾರಿಗಳು ಮುಂದಾಗಿದ್ದು, ನಿಯಮ ಪಾಲನೆ ಮಾಡದ ಆರೋಪದ ಮೇಲೆ ಕೆ.ಆರ್. ಪೇಟೆಯಲ್ಲಿನ ಹೊಸಹೊಳಲು ರಸ್ತೆಯಲ್ಲಿರುವ ನಾವಿ ಸ್ಕ್ಯಾನಿಂಗ್ ಕೇಂದ್ರಕ್ಕೆ ಬೀಗ ಜಡಿದಿದ್ದಾರೆ.
ಉಪ ವಿಭಾಗಾಧಿಕಾರಿ ನಂದೀಶ್ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಜಿತ್ ನೇತೃತ್ವದ ತಂಡವು ಮಂಗಳವಾರ ಇಲ್ಲಿನ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ತಪಾಸಣೆ ನಡೆಸಿತು.
'ತಜ್ಞ ವೈದ್ಯರಿಲ್ಲದೇ ತಪಾಸಣೆ ನಡೆಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಪರಿಶೀಲನೆ ಕೈಗೊಂಡೆವು. ಆಗ ನಾವಿ ಕೇಂದ್ರದಲ್ಲಿ ಸರಿಯಾಗಿ ದಾಖಲೆಗಳನ್ನು ನಿರ್ವಹಿಸದೆ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದ್ದರಿಂದ ಕೇಂದ್ರಕ್ಕೆ ಬೀಗ ಹಾಕಲಾಯಿತು' ಎಂದು ಅಧಿಕಾರಿಗಳು ಮಾಹಿತಿ ನೀಡಿದರು.