ಬೆಂಗಳೂರು: ಮಹದಾಯಿ ನ್ಯಾಯಮಂಡಳಿ ತೀರ್ಪಿನಿಂದ ನಮಗೆ ಪೂರ್ಣ ಸಮಾಧಾನ ಆಗಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಾವು 36.5 ಟಿಎಂಸಿ ನೀರು ಕೇಳಿದ್ದೆವು. ಆದರೆ, 13.5ಟಿಎಂಸಿ ನೀರು ಮಾತ್ರ ಕೊಟ್ಟಿದ್ದಾರೆ. ಕುಡಿಯುವ ನೀರಿಗೆ 5.4 ಟಿಎಂಸಿ ನೀರು ಸಿಗಲಿದೆ. ಉಳಿದ ನೀರು ವಿದ್ಯುತ್ ಉತ್ಪಾದನೆಗೆ ಲಭಿಸಲಿದೆ. ಆ ನೀರು ವಿದ್ಯುತ್ ಉತ್ಪಾದನೆ ಬಳಿಕ ಗೋವಾಗೇ ಹೋಗಲಿದೆ. ಅದರ ಉಪಯೋಗ ನಮಗೆ ಸಿಗಲ್ಲ ಎಂದರು.
ಮಹದಾಯಿ ವಿವಾರದಲ್ಲಿ ಐದು ವರ್ಷ ನಮ್ಮ ಸರ್ಕಾರ ಕಾನೂನು ಹೋರಾಟ ಮಾಡಿತ್ತು. ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದರು ಎಂದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಬಹಳ ದೂರ ಸಾಗಿ ಬಂದಿದ್ದೇವೆ. ಸಂವಿಧಾನದ ಆಶಯಗಳು ಇನ್ನೂ ಪರಿಪೂರ್ಣವಾಗಿ ಈಡೇರಿಲ್ಲ. ಸ್ವಾತಂತ್ರ್ಯ ಎಲ್ಲರಿಗೂ ಸಿಗುವಂತಾಗಬೇಕು. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರೆಯಬೇಕು ಎಂದರು.
ನಾವು ದೆಹಲಿಗೆ ಸದ್ಯಕ್ಕೆ ಹೋಗುತ್ತಿಲ್ಲ. ಎಐಸಿಸಿ ಅಧ್ಯಕ್ಷರು ಕರೆದಾಗ ಹೋಗುತ್ತೇವೆ ಎಂದರು.
ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿವೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದೆಲ್ಲವೂ ಮುಗಿದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದರು.